ವಲಸಿಗರ ರೈಲ್ವೇ ಪ್ರಯಾಣ ಉಚಿತ, ಕಾಂಗ್ರೆಸ್ಸಿನಿಂದ ಸುಳ್ಳು ಆರೋಪ : ಬಿಜೆಪಿ ತಿರುಗೇಟು

ನವದೆಹಲಿ: ಕೊರೊನಾ ಸಮಯದಲ್ಲಿ ಮಹಾ ನಗರಗಳಲ್ಲಿ ಊರುಗಳಿಗೆ ತೆರಳುತ್ತಿರುವ ಕಾರ್ಮಿಕರಿಗೆ ರೈಲ್ವೇ ಟಿಕೆಟ್ ವಿಧಿಸುತ್ತಿರುವ ವಿಚಾರ ಕಾಂಗ್ರೆಸ್, ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರಕ್ಕೆ ದುಡ್ಡು ಇಲ್ಲದೇ ಇದ್ದರೆ ನಾವು ಪಾವತಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದರೆ ಬಿಜೆಪಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ರೈಲ್ವೇ ಪ್ರಯಾಣಿಕರಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ಹೇಳಿದೆ.

ಈ ಸಂಬಂಧ ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, ಮೇ 2 ರಂದೇ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಯಾವುದೇ ಟಿಕೆಟ್ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಟಿಕೆಟ್ ವೆಚ್ಚದಲ್ಲಿ ಶೇ.85ರಷ್ಟು ಪಾಲನ್ನು ಭಾರತೀಯ ರೈಲ್ವೇ ಪಾವತಿಸಿದರೆ ಶೇ.15 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಪಾವತಿಸುತ್ತದೆ. ವಲಸಿಗರು ಹಣ ಪಾವತಿಸಬೇಕಿಲ್ಲ. ಯಾಕೆ ಸೋನಿಯಾ ಗಾಂಧಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಪಾವತಿಸಬೇಕು ಎಂದು ಕೇಳುವುದಿಲ್ಲ ಎಂಬುದಾಗಿ ಪ್ರಶ್ನಿಸಿದ್ದಾರೆ. ಇದನ್ನು ಓದಿ: ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

ಆದೇಶದಲ್ಲಿ ಏನಿದೆ?
ರೈಲ್ವೇ ಕೇವಲ ಪ್ರಯಾಣಿಕರನ್ನು ಸಾಗಿಸುತ್ತದೆ ಹೊರತು ಪೂರ್ಣ ಪ್ರಮಾಣದ ಸಂಚಾರ ಇರುವುದಿಲ್ಲ. ಕೆಲವು ವಿಶೇಷ ರೈಲುಗಳು ರಾಜ್ಯ ಸರ್ಕಾರಗಳ ವಿನಂತಿಯ ಮೇಲೆ ಓಡಿಸಲಾಗುತ್ತದೆ. ಎಲ್ಲ ಪ್ರಯಾಣಿಕ ಮತ್ತು ಸಬ್ ಅರ್ಬನ್ ರೈಲುಗಳ ಸಂಚಾರ ಇರುವುದಿಲ್ಲ ಎಂಬ ಅಂಶ ಮೇ 2 ರಂದು ಪ್ರಕಟಿಸಲಾದ ಆದೇಶದಲ್ಲಿದೆ. ಇದನ್ನು ಓದಿ: ನಮಸ್ತೆ ಟ್ರಂಪ್‍ಗೆ 100 ಕೋಟಿ ಖರ್ಚು ಮಾಡ್ತಾರೆ, ಆದ್ರೆ ಕಾರ್ಮಿಕರಿಗೆ ಟಿಕೆಟ್ ಹಣ ಕೇಳ್ತಾರೆ: ಪ್ರಿಯಾಂಕಾ ಗಾಂಧಿ

ಈ ಸಂಬಂಧ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿ, ನಾನು ಪಿಯೂಶ್ ಗೋಯಲ್ ಅವರ ಕಚೇರಿಯನ್ನು ಸಂಪರ್ಕಿಸಿದೆ. ಕೇಂದ್ರ ಸರ್ಕಾರ ಶೇ.85 ರಷ್ಟು ಹಣವನ್ನು ರಾಜ್ಯ ಸರ್ಕಾರ ಶೇ.15 ರಷ್ಟು ಹಣವನ್ನು ಪಾವತಿಸುತ್ತದೆ. ವಲಸಿಗರು ಉಚಿತವಾಗಿ ತೆರಳುತ್ತಾರೆ. ಈ ಸಂಬಂಧ ರೈಲ್ವೇ ಸಚಿವಾಲಯ ಅಧಿಕೃತವಾಗಿ ತಿಳಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *