ಮದ್ಯ ಸೇವಿಸ್ತೀವಿ, ನಿಯಮ ಉಲ್ಲಂಘಿಸಲ್ಲ- ಬೆಂಗ್ಳೂರಲ್ಲಿ ಮುಂಜಾನೆಯಿಂದ್ಲೇ ಕ್ಯೂ ನಿಂತ ಜನ

– ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡ ಎಣ್ಣೆಪ್ರಿಯರು

ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲಿ ದೇಶಾದ್ಯಂತ ಹೇರಲಾದ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಕರ್ನಾಟಕದಲ್ಲಿ ಇಂದಿನಿಂದ ಜನರಿಗೆ ಲಾಕ್ ಡೌನ್ ನಿಂದ ರಿಲೀಫ್ ಸಿಗಲಿದೆ. ಈ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಮುಂಜಾನೆಯಿಂದಲೇ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿರುವ ನವರಂಗ್ ಸಿಗ್ನಲ್ ಬಳಿಯ ಬಾರ್ ವೊಂದರ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಮಾಸ್ಕ್ ಧರಿಸಿ ಜನ ಕ್ಯೂನಲ್ಲಿ ನಿಂತಿದ್ದಾರೆ.

ಬಾರ್ ಓಪನ್ ಆಗ್ತಿರೋದಕ್ಕೆ ಎಣ್ಣೆ ಪ್ರಿಯರು ಖುಷಿಯನ್ನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ಕ್ಯೂನಲ್ಲಿ ನಿಂತ ಜನ, ತುಂಬಾ ಖುಷಿಯಾಗ್ತಿದೆ ಸರ್. ನಮ್ಮ ಕೈಗೆ ಯಾವಾಗ ಬಾಟಲ್ ಸಿಗುತ್ತೋ ಅಂತ ಕಾಯುತ್ತಾ ಇದ್ದೀವಿ. ಮದ್ಯ ಸೇವಿಸ್ತೀವಿ. ಆದರೆ ನಿಯಮಗಳನ್ನ ಉಲ್ಲಂಘಿಸಲ್ಲ ಅಂತ ಹೇಳುತ್ತಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಮದ್ಯದಂಗಡಿಗಳು ಓಪನ್ – ಒಬ್ಬರಿಗೆ ಎಷ್ಟು ಕ್ವಾಟರ್ ಎಣ್ಣೆ? ನಿಯಮ ಏನು?

ಇತ್ತ ಮದ್ಯ ಮಾರಾಟಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಮಾರಾಟಗಾರರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅಂಗಡಿಯ ಮುಂದೆ ಮರದ ಕಂಬಗಳನ್ನ ಬಳಕೆ ಮಾಡಿ ಕ್ಯೂಗೆ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಆರು ಅಡಿಗಳಿಗೆ ಒಂದರಂತೆ ಬಾಕ್ಸ್ ಬರೆದಿರೋ ಸಿಬ್ಬಂದಿ, ಆ ಬಾಕ್ಸ್ ನಲ್ಲೇ ನಿಂತು ಬರುವಂತೆ ನಿರ್ದೇಶನ ನೀಡಿದ್ದಾರೆ. ಭಾನುವಾರವೇ ಎಂಆರ್‍ಪಿ ಸೆಂಟರ್ ಗಳು ಈ ಸಿದ್ಧತೆ ಮಾಡಿಕೊಂಡಿವೆ. ಇದನ್ನೂ ಓದಿ: ನಾಳೆ ಬಾರ್ ಓಪನ್ – ಇಂದೇ ಮದ್ಯದಂಗಡಿಗೆ ಆರತಿ ಎತ್ತಿ, ಕಾಯಿ ಒಡೆದ ಮದ್ಯಪ್ರಿಯ

ನಿಯಮಗಳೇನು?
ಒಬ್ಬರಿಗೆ ಎರಡೇ ಲೀಟರ್ ಮದ್ಯ ಸಿಗಲಿದ್ದು, ಬೆಳಗ್ಗೆ 9 ರಿಂದ ಸಂಜೆ 7 ರ ತನಕ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ನಗರದ ಹಲವಡೆ ಬಾರ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಡ್ ನಿರ್ಮಿಸಿ, ಬಾಕ್ಸ್ ಗಳ ಅಳವಡಿಕೆ ಮಾಡಲಾಗಿದೆ. ಲಾಕ್ ಡೌನ್ ಹಿನ್ನಲೆ ಸ್ಥಗಿತಗೊಂಡಿದ್ದ ಮದ್ಯ ಮಾರಾಟ 42 ದಿನಗಳ ಬಳಿಕ ಆರಂಭವಾಗುತ್ತಿದ್ದು, ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಎಂಎಸ್‍ಐಎಲ್ (ಸಿಎಲ್ 11ಸಿ) , ಸಿಎಲ್ 2 ನಲ್ಲಿ ಪಾರ್ಸೆಲ್ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಯಶವಂತಪುರ, ಮತ್ತಿಕೆರೆ, ರಾಜಾಜಿನಗರ ಸೇರಿದಂತೆ ಹಲವಡೆ ಬಾರ್ ಗಳ ಮುಂದೆ ಬ್ಯಾರಿಕೇಡ್ ಅಳವಡಿಕೆ, ಮದ್ಯ ಮಾರಾಟಕ್ಕೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಬಾರ್‌ಗಳ ಮುಂದೆ ಸ್ವತಃ ತಾವೇ ಬ್ಯಾರಿಕೇಡ್ ನಿರ್ಮಿಸಿದ ಮದ್ಯ ಪ್ರಿಯರು

Comments

Leave a Reply

Your email address will not be published. Required fields are marked *