ಮೇ 17ರವರೆಗೆ ಚಿಕ್ಕಮಗಳೂರು ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

ಚಿಕ್ಕಮಗಳೂರು: ಕೆಲವೊಂದು ನಿಯಮಗಳನ್ನು ಹೊರತುಪಡಿಸಿ ಗ್ರೀನ್ ಜೋನ್‍ನಲ್ಲಿರೋ ಜಿಲ್ಲೆಗೆ ಮೂರನೇ ಹಂತದ ಲಾಕ್‍ಡೌನ್ ಅನ್ವಯವಾಗದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾದ್ಯಂತ ಮೇ 4ರಿಂದ ಮೇ 17ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಚಿಕ್ಕಮಗಳೂರು ಡಿಸಿ ಸುತ್ತೋಲೆ ಹೊರಡಿಸಿದ್ದಾರೆ.

ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಐದು ಜನ ಗುಂಪಾಗಿ ಸೇರದಂತೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು ಸೂಚನೆ ನೀಡಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಕಾಫಿನಾಡಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸಿಲ್ಲ. ಹಾಗಾಗಿ ಚಿಕ್ಕಮಗಳೂರು ಗ್ರೀನ್ ಜೋನ್‍ನಲ್ಲಿದೆ. ಈಗ ಸರ್ಕಾರ ಗ್ರೀನ್ ಜೋನ್ ಜಿಲ್ಲೆಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಲಾಕ್‍ಡೌನ್‍ನನ್ನು ಸಂಪೂರ್ಣ ಸಡಿಲಿಕೆ ಮಾಡಿದೆ.

ಕೇಂದ್ರ ಸರ್ಕಾರ ಕೊರೊನಾ ಆತಂಕದಿಂದ ದೇಶದಲ್ಲಿ ಇನ್ನೆರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಿಸೋದ್ರಿಂದ ಗ್ರೀನ್ ಜೋನ್‍ನಲ್ಲಿರೋ ಚಿಕ್ಕಮಗಳೂರಲ್ಲಿ ಎರಡು ವಾರಗಳ ಕಾಲವೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮದುವೆ ಹಾಗೂ ಅಂತ್ಯಸಂಸ್ಕಾರದಂತಹಾ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಉಳಿದಂತೆ ಜನ ಗುಂಪಾಗಿ ಸೇರುವಂತಿಲ್ಲ ಎಂದು ಡಿಸಿ ಆದೇಶ ಮಾಡಿದ್ದಾರೆ.

ನಾಳೆಯಿಂದ ಜಿಲ್ಲಾದ್ಯಂತ ಸರ್ಕಾರಿ ಬಸ್‍ಗಳೂ ಓಡಾಡಲಿದ್ದು, ಜಿಲ್ಲಾದ್ಯಂತ 100-120 ಬಸ್‍ಗಳು ತಾಲೂಕು ಕೇಂದ್ರಗಳಿಗೆ ಸಂಚರಿಸಲಿವೆ. ಸರ್ಕಾರದ ಕೆಲವೊಂದು ಷರತ್ತುಗಳನ್ನ ಹೊರತುಪಡಿಸಿದರೆ ಚಿಕ್ಕಮಗಳೂರಿನಲ್ಲಿ ಎಲ್ಲ ಚಟುವಟಿಕೆಗಳು ಎಂದಿನಂತೆ ಆರಂಭವಾಗಲಿದೆ ಎಂದು ತಿಳಿಸಿಲಾಗಿದೆ.

Comments

Leave a Reply

Your email address will not be published. Required fields are marked *