ಸುದೀಪ್ ಓರ್ವ ಅತ್ಯುತ್ತಮ ನಿರ್ದೇಶಕ: ಅನು ಪ್ರಭಾಕರ್

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಓರ್ವ ಉತ್ತಮ ನಿರ್ದೇಶಕ ಎಂದು ನಟಿ ಅನು ಪ್ರಭಾಕರ್ ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಸುದೀಪ್ ಅನೇಕ ವರ್ಷಗಳ ಹಿಂದೆ ‘ನಂ.73 ಶಾಂತಿ ನಿವಾಸ’ ಸಿನಿಮಾವನ್ನು ನಿರ್ದೇಶಿಸಿ ಯಶಸ್ವಿಕಂಡಿದ್ದರು. ಅಂದಿಗೆ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇತ್ತೀಚೆಗೆ ‘ನಂ.73 ಶಾಂತಿ ನಿವಾಸ’ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಈ ಚಿತ್ರವನ್ನು ನೋಡಿದ ಅಭಿಮಾನಿಯೊಬ್ಬರು ಅನು ಪ್ರಭಾಕರ್‌ಗೆ ಟ್ವೀಟ್ ಮಾಡಿ, ನಿಮ್ಮ ಅಭಿನಯ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯ ಟ್ವೀಟ್‍ಗೆ ಪ್ರತಿಕ್ರಿಯಿಸಿದ ನಟಿ ಅನು ಪ್ರಭಾಕರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನಂ.73 ಶಾಂತಿ ನಿವಾಸ’ ಸಿನಿಮಾವನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಸಿನಿಮಾ ವೃತ್ತಿ ಜೀವನದಲ್ಲಿ ನಾನು ಕೆಲಸ ಮಾಡಿದ ಅತ್ಯುತ್ತಮ ನಿರ್ದೇಶಕರಲ್ಲಿ ಕಿಚ್ಚ ಸುದೀಪ್ ಒಬ್ಬರು. ಈ ಬಗ್ಗೆ ನಾನು ಅನೇಕ ಬಾರಿ ಹೇಳಿದ್ದೇನೆ” ಎಂದು ಖುಷಿಯಿಂದ ಸುದೀಪ್ ನಿರ್ದೇಶನದ ಬಗ್ಗೆ  ಮಾತನಾಡಿದರು.

ಅನು ಪ್ರಭಾಕರ್ ಟ್ವೀಟ್ ನೋಡಿದ ಸುದೀಪ್, “ನೀವು ಕೂಡ ತುಂಬಾ ಅತ್ಯುತ್ತಮ ನಟಿ ಅನು ಪ್ರಭಾಕರ್. ಹೀಗಾಗಿ ಶೀಫ್ರದಲ್ಲೇ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಹೌದು. ’73 ಶಾಂತಿ ನಿವಾಸ’ ಸಿನಿಮಾ ನನಗೆ ಯಾವಾಗಲು ಉತ್ತಮ ಆಯ್ಕೆಯಾಗಿದೆ. ನೀವೆಲ್ಲರೂ ಅದ್ಭುತ ನಟರು, ನನಗೆ ಜೀವನ ಕೊಟ್ಟವರು” ಎಂದು ಧನ್ಯವಾದ ತಿಳಿಸಿದ್ದಾರೆ.

ಅಲ್ಲದೇ ಸಿನಿಮಾದಲ್ಲಿ ಅಭಿನಯಿಸಿದ್ದ ಮಾಸ್ಟ್ ಹಿರಣ್ಯಯ್ಯ ಸರ್ ಮತ್ತು ವಿಶಾಲಿ ಮೇಡಮ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ ಎಂದು ಸಿನಿಮಾದ ಬಗ್ಗೆ ಸುದೀಪ್ ಮಾತನಾಡಿದ್ದಾರೆ.

‘ನಂ.73 ಶಾಂತಿ ನಿವಾಸ’ ಸಿನಿಮಾ 2007ರಲ್ಲಿ ರಿಲೀಸ್ ಆಗಿದ್ದು, ಮನೆಮಂದಿಯೆಲ್ಲ ಕುಳಿತುಕೊಂಡು ನೋಡಬಹುದಾದ ಚಿತ್ರವಾಗಿದೆ. ಹೀಗಾಗಿ ಸಿನಿಮಾ ಪ್ರೇಕ್ಷಕರ ಮೆಚ್ಚಗೆಯನ್ನು ಗಳಿಸಿತ್ತು. ಅಹಂಕಾರದಿಂದ ಇದ್ದ ಒಂದು ಕುಟುಂಬವನ್ನು ಮನೆಗೆ ಬರುವ ಅಡಿಗೆಯವನೊಬ್ಬ ಸರಿಪಡಿಸುವ ಕಥೆಯೇ ‘ಶಾಂತಿ ನಿವಾಸ’ ಚಿತ್ರವಾಗಿದೆ. ಚಿತ್ರದಲ್ಲಿ ಸುದೀಪ್ ಅಡುಗೆ ಭಟ್ಟರಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಸುದೀಪ್, ಮಾಸ್ಟರ್ ಹಿರಣ್ಯಯ್ಯ, ಶ್ರೀನಿವಾಸ್ ಮೂರ್ತಿ, ರಮೇಶ್ ಭಟ್, ಅನು ಪ್ರಭಾಕರ್, ಕೋಮಲ್, ವೈಶಾಲಿ ಕಾಸರವಳ್ಳಿ, ಚಿತ್ರಾ ಶೆಣೈ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದರು.

Comments

Leave a Reply

Your email address will not be published. Required fields are marked *