10 ಮಂದಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಚಿಕ್ಕಮಗಳೂರು: ಕೊರೊನಾ ಆತಂಕ ಹಾಗೂ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕೇವಲ 10 ಮಂದಿಯ ಸಮ್ಮುಖದಲ್ಲಿ ಸರಳವಾದ ಮದುವೆಯೊಂದು ನಡೆದಿದೆ.

ಮೂಡಿಗೆರೆ ತಾಲೂಕಿನ ಬೈದುವಳ್ಳಿ ಗ್ರಾಮದ ರಂಜಿತ್ ಹಾಗೂ ಮೇಘ ಮದುವೆ ಇಂದು ಮೂಡಿಗೆರೆ ನಗರದ ರೈತ ಭವನದಲ್ಲಿ ನಿಶ್ಚಯವಾಗಿತ್ತು. ಆದರೆ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಅಲ್ಲದೇ ಮದುವೆ, ಸಭೆ, ಸಮಾರಂಭಗಳಿಗೆ ಸರ್ಕಾರ ಅವಕಾಶ ನೀಡದ ಹಿನ್ನೆಲೆಯಲ್ಲಿ ಈ ಜೋಡಿ ಬೈದುವಳ್ಳಿ ಗ್ರಾಮದಲ್ಲಿನ ಈಶ್ವರ ದೇವಾಲಯದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸರಳ ಮದುವೆಯಲ್ಲಿ ವಧು-ವರರ ಪೋಷಕರು, ಅರ್ಚಕರು ಹಾಗೂ ಆಪ್ತ ಸಂಬಂಧಿಗಳಷ್ಟೆ ಭಾಗವಹಿಸಿದ್ದರು. ಹತ್ತು ಮಂದಿಗಿಂತ ಹೆಚ್ಚಿನ ಜನ ಮದುವೆಯಲ್ಲಿ ಇರಲಿಲ್ಲ. ಮದುವೆಯಲ್ಲಿ ಭಾಗಿಯಾದ ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.

ವಧು-ವರರೂ ಕೂಡ ಮಾಸ್ಕ್ ಹಾಕಿಕೊಂಡೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಮಾಡಿಸಿದ ಪುರೋಹಿತರು ಕೂಡ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾಂಪ್ರದಾಯಿಕವಾಗಿ ಮದುವೆ ಮಾಡಿಸಿದ್ದಾರೆ. ಕೊರೊನಾ ಭಯದಲ್ಲಿ ಇಡೀ ದೇಶವೇ ಲಾಕ್‍ಡೌನ್ ಆದ ಮೇಲೆ ಮಲೆನಾಡು ಸೇರಿದಂತೆ ಅನೇಕ ಕಡೆ ಇದೇ ರೀತಿಯ ಸರಳ ವಿವಾಹಗಳು ನಡೆಯುತ್ತಿವೆ.

Comments

Leave a Reply

Your email address will not be published. Required fields are marked *