ರೋಗಿಯನ್ನ ಆಸ್ಪತ್ರೆಗೆ ಸೇರಿಸಿ ಸ್ವತಃ 20 ಸಾವಿರ ಬಿಲ್ ಪಾವತಿಸಿದ ಪೊಲೀಸ್

ಹೈದರಾಬಾದ್: ಲಾಕ್‍ಡೌನ್ ಶುರುವಾದಾಗಿನಿಂದ ಪೊಲೀಸರು ಹಗಲು-ರಾತ್ರಿಯೆನ್ನದೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಕೆಲ ಪೊಲೀಸರು ಬಡವರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ ಹಿಮಾಚಲ ಪ್ರದೇಶದ ವ್ಯಕ್ತಿಯ ತುರ್ತು ಶಸ್ತ್ರಚಿಕಿತ್ಸೆಗಾಗಿ ಹೈದರಾಬಾದಿನ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಜೇಬಿನಿಂದ 20,000 ರೂ. ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕುಕತ್ಪಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ರೆಡ್ಡಿ ರೋಗಿಯ ಆಸ್ಪತ್ರೆ ಬಿಲ್ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ. ಲಲಿತ್ ಕುಮಾರ್ ಹಿಮಾಚಲ ಪ್ರದೇಶದ ಹಮೀರ್ ಪುರ್ ಜಿಲ್ಲೆಯ ನಿವಾಸಿಯಾಗಿದ್ದು, ಲಾಕ್‍ಡೌನ್ ಪರಿಣಾಮ ಹೈದರಾಬಾದಿನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆದರೆ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆ ಇತ್ತು.

ಈ ಹಿನ್ನೆಲೆಯಲ್ಲಿ ಲಲಿತ್ ಕುಮಾರ್ ಕೋವಿಡ್ -19 ಕಂಟ್ರೋಲ್ ರೂಂಗೆ ಕುಕಾಟ್ಪಲ್ಲಿ ವಿಭಾಗದಿಂದ ಫೋನ್ ಮಾಡಿದ್ದು, ತುರ್ತಾಗಿ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ತಿಳಿಸಿದ್ದರು. ತಕ್ಷಣ ಈ ವಿಚಾರವನ್ನು ಕುಕತ್ಪಲ್ಲಿ ಪೊಲೀಸರಿಗೆ ತಿಳಿಸಲಾಗಿದೆ. ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ರೆಡ್ಡಿ, ಲಲಿತ್ ಕುಮಾರ್ ಇರುವ ಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಲಲಿತ್ ಕುಮಾರ್ ಅಪೆಂಡಿಕ್ಸ್ ನೋವಿನಿಂದ ಬಳಲುತ್ತಿದ್ದರು. ಆದರೆ ಲಲಿತ್ ಕುಮಾರ್ ಬಳಿ ಹಣವಿಲ್ಲದ ಕಾರಣ ಆಸ್ಪತ್ರೆಗೆ ಹೋಗಿರಲ್ಲಿ. ನಂತರ ರೆಡ್ಡಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿ ಚಿಕಿತ್ಸೆ ಕೊಡಿಸಿದ್ದಾರೆ.

ಅಲ್ಲದೇ ರೆಡ್ಡಿ ಅವರೇ ಸ್ವಃತ ರೋಗಿಯ 20 ಸಾವಿರ ಆಸ್ಪತ್ರೆಯ ಬಿಲ್ ಪಾವತಿಸಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ, “ನಮ್ಮ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನಾರ್ ಅವರ ಆದೇಶಗಳನ್ನು ಪಾಲಿಸಿದ್ದೇನೆ. ನಾನು ಅವರನ್ನು ಪ್ರತಿಬಾರಿ ಭೇಟಿ ಮಾಡಿದಾಗಲೂ, ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಮ್ಮ ಜವಬ್ದಾರಿಯಾಗಿದೆ ಎಂದು ಹೇಳುತ್ತಾರೆ. ಹೀಗಾಗಿ ನನ್ನ ಕೈಲಾದ ಸಹಾಯ ಮಾಡಿದ್ದೇನೆ” ಎಂದಿದ್ದಾರೆ.

Comments

Leave a Reply

Your email address will not be published. Required fields are marked *