ಹುಟ್ಟುಹಬ್ಬಕ್ಕೆ ಕೂಡಿಟ್ಟ 11,111 ರೂ. ಕೊರೊನಾ ಹೋರಾಟಕ್ಕೆ ನೀಡಿದ ಬಾಲಕಿ

– ಪ್ರತಿವರ್ಷ ಕೂಡಿಟ್ಟಿದ್ದ ಹಣವನ್ನು ಅನಾಥಾಶ್ರಮಕ್ಕೆ ನೀಡ್ತಿದ್ದ ಪೋರಿ
– ಮೋದಿ ತಾತ ಉತ್ತಮ ಕೆಲ್ಸ ಮಾಡ್ತಿದ್ದಾರೆ ಅದಕ್ಕೆ ಸಹಾಯ ಮಾಡ್ತಿದೀನಿ

ಕೋಲಾರ: ಕಳೆದ ಒಂದು ವರ್ಷದಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪುಟಾಣಿ ಬಾಲಕಿಯೊರ್ವಳು ಮಾದರಿಯಾಗಿದ್ದಾಳೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮೂಲದ 2ನೇ ತರಗತಿ ವಿದ್ಯಾರ್ಥಿನಿ ಚರಿತ ಆರ್. ರಾಯಲ್ ಪಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾಳೆ. ಹುಟ್ಟುಹಬ್ಬಕ್ಕೆಂದು ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನ ಕೊರೊನಾ ಪರಿಹಾರ ನಿಧಿಗೆ ಬಾಲಕಿ ನೀಡಿದ್ದಾಳೆ. ಕೋವಿಡ್-19 ಚಿಕಿತ್ಸೆಗಾಗಿ ತಾನೂ ಕೂಡಿಟ್ಟಿದ್ದ 11,111 ರೂಪಾಯಿ ಹಣವನ್ನು ಕೋಲಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಬಾಲಕಿ ಹಸ್ತಾಂತರ ಮಾಡಿದ್ದಾಳೆ.

ಪ್ರತಿವರ್ಷ ತನ್ನ ಹುಟ್ಟುಹಬ್ಬದ ದಿನ ಕೂಡಿಟ್ಟಿದ್ದ ಹಣವನ್ನು ಅನಾಥಶ್ರಮಕ್ಕೆ ನೀಡುತ್ತಿದ್ದ ವಿದ್ಯಾರ್ಥಿನಿ, ಈ ಬಾರಿ ಪ್ರಧಾನಮಂತ್ರಿ ರಿಲೀಫ್ ಫಂಡ್‍ಗೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಮಂಗಳವಾರ ಚರಿತಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಹುಟ್ಟುಹಬ್ಬದ ಹಿನ್ನೆಲೆ ಬಾಲಕಿ ದೇಣಿಗೆ ನೀಡಿದ್ದಾಳೆ. ಮೋದಿ ತಾತ ಉತ್ತಮ ಕೆಲಸ ಮಾಡ್ತಿದ್ದಾರೆ, ಆದ್ದರಿಂದ ಈ ನಿರ್ಧಾರ ಮಾಡಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ತನ್ನ ಪೋಷಕರಾದ ಲಾವಣ್ಯ ಹಾಗೂ ರಮೇಶ್ ಕುಮಾರ್ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗೆ ಬಾಲಕಿ  ಹಣವನ್ನ ನೀಡಿದ್ದಾಳೆ. ವಿದ್ಯಾರ್ಥಿನಿಯ ಈ ಕಾರ್ಯಕ್ಕೆ ಕೋಲಾರ ಡಿಸಿ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *