50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಣೆಗೆ ಮುಂದಾದ ಶಿವಲಿಂಗೇಗೌಡ

ಹಾಸನ: ಹೆಮ್ಮಾರಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೈಗೊಂಡಿರುವ ಲಾಕ್‍ಡೌನ್‍ನಿಂದಾಗಿ ಜನ ಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ 50 ಸಾವಿರ ಆಹಾರ ಧಾನ್ಯಗಳ ಕಿಟ್ ವಿತರಿಸಲು ಶಾಸಕ ಶಿವಲಿಂಗೇಗೌಡ ಮುಂದಾಗಿದ್ದಾರೆ.

ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಅವರು ಜನರಿಗೆ ಅನುಕೂಲವಾಗಲಿ ಎಂದು ಈಗಾಗಲೇ ಆಹಾರ ಧಾನ್ಯ ತುಂಬಿದ ಸುಮಾರು 50 ಸಾವಿರ ಕಿಟ್‍ಗಳನ್ನು ಸಿದ್ಧಪಡಿಸಿದ್ದಾರೆ. ಕಿಟ್‍ಗಳು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ 530 ಹಳ್ಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಈಗಾಗಲೇ ಶಾಸಕ ಶಿವಲಿಂಗೇಗೌಡ ಕಿಟ್ ಹಂಚಿಕೆ ಮಾಡುತ್ತಿದ್ದಾರೆ.

ಶಿವಲಿಂಗೇಗೌಡ ಅವರು ಕೆಲವೊಂದು ಹಳ್ಳಿಗಳಿಗೆ ತಾವೇ ಸ್ವತಃ ತೆರಳಿ ಬೆಂಬಲಿಗರೊಂದಿಗೆ ಕಿಟ್ ಹಂಚಿಕೆ ಮಾಡುತ್ತಿದ್ದಾರೆ. ಇನ್ನುಳಿದ ಹಳ್ಳಿಗಳಲ್ಲಿ ತಮ್ಮ ಕಾರ್ಯಕರ್ತರ ಮೂಲಕ ಕಿಟ್ ಹಂಚುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು, ಎಷ್ಟು ಜನರಿಗೆ ಅಗತ್ಯವಿದೆಯೋ ಅವರಿಗೆ ತಮ್ಮ ಕೈಲಾದ ಮಟ್ಟಿಗೆ ಆಹಾರ ಧಾನ್ಯದ ಕಿಟ್ ತಲುಪಿಸುತ್ತಿದ್ದೇವೆ. ಒಂದು ವೇಳೆ ಏಪ್ರಿಲ್ ತಿಂಗಳ ನಂತರವೂ ಲಾಕ್‍ಡೌನ್ ಮುಂದುವರಿದರೆ ಕೈಲಾದ ಸಹಾಯ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *