ಸಾಲ ಪಡೆದು ಬೆಳೆದ ಲಕ್ಷಾಂತರ ರೂ. ಮೌಲ್ಯದ ಅಂಜೂರ ತಿಪ್ಪೆಪಾಲು

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ಸಾಲ ಮಾಡಿ ಬೆಳೆದ ಅಂಜೂರ ಬೆಳೆಯನ್ನ ಸ್ವತಃ ರೈತರೊಬ್ಬರು ತಿಪ್ಪೆಗೆ ಸುರಿದಿದ್ದಾರೆ. ರೈತ ಮಲ್ಲಿಕಾರ್ಜುನ ಗೌಡ ಅವರು ಬಹಳ ನಿರೀಕ್ಷೆಗಳೊಂದಿಗೆ ಅಂಜೂರ ಬೆಳೆದಿದ್ದರು. ಆದರೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೇ ನಿತ್ಯ ಮೂರರಿಂದ ನಾಲ್ಕು ಕ್ವಿಂಟಾಲ್ ಅಂಜೂರ ಮಣ್ಣು ಪಾಲಾಗುತ್ತಿದೆ.

25 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ 20ಎಕರೆಯಲ್ಲಿ ಅಂಜೂರ ಬೆಳೆದಿರುವ ರೈತ ಮಲ್ಲಿಕಾರ್ಜುನ ಗೌಡ ಅನಿವಾರ್ಯವಾಗಿ ತಿಪ್ಪೆಗೆ ಸುರಿಯುತ್ತಿದ್ದಾರೆ. ಲಾಕ್‍ಡೌನ್‍ಗಿಂತ ಮುಂಚೆ ಬೆಂಗಳೂರು ಸೇರಿದಂತೆ ಬೇರೆಡೆ ಮಾರುಕಟ್ಟೆಗಳಿಗೆ ಅಂಜೂರ ಕೊಂಡೊಯ್ಯಲಾಗುತ್ತಿತ್ತು. ಸದ್ಯ ಲಾಕ್‍ಡೌನ್‍ನಿಂದಾಗಿ ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿರುವ ರೈತ ಸರ್ಕಾರ ನೆರವಿಗೆ ಧಾವಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಪ್ರತಿ ದಿನ ಅಂಜೂರ ಹಾಳಾಗುತ್ತಿದ್ದು, ಈಗಲಾದ್ರೂ ಸರ್ಕಾರ ಸಹಾಯಕ್ಕೆ ಬಂದರೆ ಮಲ್ಲಿಕಾರ್ಜುನ ಗೌಡ ಅವರು ಸೇರಿದಂತೆ ಅಂಜೂರ ಬೆಳೆದ ರೈತರು ಬದುಕಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಹಾಪ್ ಕಾಮ್ಸ್ ಇಲ್ಲದೆ ಇರುವುದರಿಂದ ತೋಟಗಾರಿಕಾ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *