ಮೈಸೂರು ವ್ಯಕ್ತಿಯ ಸ್ಥಿತಿ ಗಂಭೀರ – ವೈದ್ಯರು, ನರ್ಸ್‍ಗಳಿಗೆ ಕ್ವಾರಂಟೈನ್

ಮೈಸೂರು: ಯಾರ ಸಂಪರ್ಕ ಇರದೇ ಕೊರೊನಾ ಸೋಂಕು ಬಂದಿರುವ 72 ವರ್ಷದ ರೋಗಿಯ ಸ್ಥಿತಿ ಗಂಭೀರವಾಗಿದೆ.

ಸಿವಿಯರ್ ಅಕ್ಯೂಟ್ ರೆಸ್ಪರೇಟರಿ ಇಲ್‍ನೆಸ್(SARI) ಬಂದಿದೆ ಎಂದು ವೈದ್ಯರು ಗುರುತಿಸಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ವ್ಯಕ್ತಿ ಐಸೋಲೇಷನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಿತ ವಿಶೇಷ ನಿಗಾದಲ್ಲಿದ್ದಾರೆ.

ನಂಜನಗೂಡು ಫಾರ್ಮಾ ಕಂಪನಿ ಅಥವಾ ಇಲ್ಲಿನ ನೌಕರರ ಜೊತೆ ಸಂಪರ್ಕದಿಂದ ಕೊರೊನಾ ಬಂದರೆ ಭಯವಾಗುತ್ತಿರಲಿಲ್ಲ. ದೆಹಲಿಯ ನಿಜಾಮುದ್ದೀನ್ ಸಂಪರ್ಕವೂ ಇಲ್ಲ. ಕೊರೊನಾ ಪೀಡಿತ ವ್ಯಕ್ತಿಗಳ ಜೊತೆ ಸಂಪರ್ಕ ಇಲ್ಲದೇ ಸೋಂಕು ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಈ ವೃದ್ಧ ಆರಂಭದದಲ್ಲಿ ಮೈಸೂರಿನ ಶ್ರೀ ಮಹದೇಶ್ವರ ನರ್ಸಿಂಗ್ ಹೋಂ ನಲ್ಲಿ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದರು. ಇಲ್ಲಿ ರಕ್ತಪರೀಕ್ಷೆ ಮಾಡಲಾಗಿತ್ತು. ನಂತರ ಆಂಟಿಬಯೋಟಿಕ್ ಕೊಟ್ಟು ಅಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಈಗ ಆ ವ್ಯಕ್ತಿಗೆ ಕರೋನಾ ಸೋಂಕು ದೃಢವಾಗಿದೆ. ಇದರಿಂದ ಇಡೀ ನರ್ಸಿಂಗ್ ಹೋಂ ನಲ್ಲಿದ್ದ ಎಲ್ಲಾ ವೈದ್ಯರು, ನರ್ಸ್ ಗಳು, 200 ರೋಗಿಗಳು ಎಲ್ಲರನ್ನೂ ಮೈಸೂರು ಜಿಲ್ಲಾಡಳಿತ ಹೋಂಕ್ವಾರಟೈನ್ ಮಾಡಿದೆ.

ಈಗ ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ರೋಗಿಗಳು ಮೈಸೂರಿನಲ್ಲಿದ್ದಾರೆ. ಬೆಂಗಳೂರಿನಲ್ಲಿ 71 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 35 ಮಂದಿ ಗುಣಮುಖರಾಗಿದ್ದಾರೆ. 34 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಮೃತಪಟ್ಟಿದ್ದಾರೆ. ಆದರೆ ಮೈಸೂರಿನಲ್ಲಿ 58 ಮಂದಿಗೆ ಸೋಂಕು ಬಂದಿದ್ದು, 12 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 46 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಸದ್ಯ ಅತಿ ಹೆಚ್ಚು ಕೊರೊನಾ ಪೀಡಿತರು ಮೈಸೂರು ಜಿಲ್ಲೆಯಲ್ಲಿದ್ದಾರೆ. ಒಟ್ಟು 1,564 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ.

Comments

Leave a Reply

Your email address will not be published. Required fields are marked *