ವೈದ್ಯಕೀಯ ಪಾಸ್ ಪಡೆದು ಮದ್ವೆಗೆ ತೆರಳಿದ್ದವರು ಕ್ವಾರಂಟೈನ್‍

– ಕಾರು ವಶಕ್ಕೆ ಪಡೆದ ಡಿವೈಎಸ್‍ಪಿ

ಧಾರವಾಡ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರೋಗ್ಯ, ತುರ್ತು ವೈದ್ಯಕೀಯ ತಪಾಸಣೆಗಾಗಿ ಮಾನವೀಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯವಿರುವವರಿಗೆ ಪಾಸ್ ನೀಡುವ ಸೌಲಭ್ಯ ಕಲ್ಪಿಸಿದೆ. ಆದರೆ ನರೇಂದ್ರ ಗ್ರಾಮದಲ್ಲಿ ಡಿವೈಎಸ್‍ಪಿ ರವಿನಾಯಕ್ ರೌಂಡ್ಸ್ ನಲ್ಲಿದ್ದಾಗ ವೈದ್ಯಕೀಯ ಪಾಸ್ ಪಡೆದು ಮದುವೆ ಕಾರ್ಯ ಮುಗಿಸಿ ಬಂದ ಕಾರನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ.

ಪಾಸ್ ದುರುಪಯೋಗ ಪಡಿಸಿಕೊಂಡಿರುವರು ವಧುವಿನ ಕಡೆಯವರಾಗಿದ್ದು, ಉಪ್ಪಿನ ಬೇಟಗೇರಿ ಗ್ರಾಮದವರು ಎಂದು ತಿಳಿದು ಬಂದಿದೆ. ಮಂಗಳವಾರ ಹುಬ್ಬಳ್ಳಿಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳನ್ನು ತಪ್ಪಿಸಿ, ಹುಬ್ಬಳ್ಳಿಯಿಂದ ಕಾರಿನಲ್ಲಿ ಒಂದು ಮಗು ಸೇರಿದಂತೆ ಒಟ್ಟು 9 ಜನ ಹೋಗಿದ್ದರು. ಇಂದು ಮದುವೆ ಮುಗಿಸಿ ವಾಪಸ್ ಬರುವಾಗ ಡಿವೈಎಸ್‍ಪಿ ಕಾರು ನಿಲ್ಲಿಸಿ ಪರಿಶೀಲಿಸಿದಾಗ ತುರ್ತು ವೈದ್ಯಕೀಯ ಅಗತ್ಯಕ್ಕಾಗಿ ನೀಡಿದ್ದ ಪಾಸ್ ದುರುಪಯೋಗ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

ಎಸ್‍ಪಿ ವರ್ತಿಕಾ ಕಟಿಯಾರ್ ಅವರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಪ್ರವೃತರಾದ ಡಿವೈಎಸ್‍ಪಿ ರವಿ ನಾಯಕ್ 9 ಜನರನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸ್ ವಾಹನದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ನಂತರ ಕಾರನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ ತಪಾಸಣೆ ನಂತರ ಎಲ್ಲರನ್ನೂ ಹೋಮ್ ಕ್ವಾರಂಟೈನ್ ಕಡ್ಡಾಯಗೊಳ್ಳಿಸಿ, ಸಂಬಂಧಿಸಿದವರಿಗೆ ನಿರ್ದೇಶನ ನೀಡಿದ್ದಾರೆ.

ಮಾನವೀಯ ಹಿನ್ನೆಲೆಯಲ್ಲಿ ಅಗತ್ಯ ಮತ್ತು ತುರ್ತು ನೇರವಿಗಾಗಿ ಜಿಲ್ಲಾಡಳಿತ ನೀಡುವ ಪಾಸ್‍ಗಳನ್ನು ದುರುಪಯೋಗಪಡಿಸಿಕೊಂಡರೆ ಅಂತಹವರ ವಾಹನಗಳನ್ನು ಜಪ್ತಿ ಮಾಡಲಾಗುತ್ತದೆ. ಅಲ್ಲದೇ ಅಧಿಕ ದಂಡ ವಿಧಿಸಲಾಗುವುದು. ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್‍ಪಿ ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *