ಕಾರ್ಕಳದಲ್ಲಿ ಆಲಿಕಲ್ಲು ಮಳೆ, ಗುಡುಗು ಸಿಡಿಲಿಗೆ ಜನ ಹೈರಾಣ

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಕಾರ್ಕಳ ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಬಿರು ಬಿಸಿಲಿನ ನಡುವೆ ಮಳೆರಾಯ ತಂಪೆರೆದಿದ್ದಾನೆ.

ಕಾರ್ಕಳ ತಾಲೂಕಿನ ಜೋಡು ರಸ್ತೆ, ಅಜೆಕಾರು ಮುನಿಯಾಲು ಹೆಬ್ರಿ ಬಜೆಗೋಳಿ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಮೂರನೇ ಬಾರಿ ಮಳೆಯಾಗುತ್ತಿದೆ. ಉಡುಪಿ ನಗರದಾದ್ಯಂತ ತುಂತುರು ಮಳೆಯಾಗಿದ್ದು, ಇಡೀ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ.

ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉಷ್ಣಾಂಶ ವಿಪರೀತ ಆಗಿತ್ತು. ಬಿಸಿಲಿನ ಶಾಖಕ್ಕೆ ಮೋಡ ಕರಗಿ ಮಳೆಯಾಗಿದೆ. ಕಾಪುವಿನ ಶಿರ್ವದಲ್ಲಿ ಗಾಳಿ ಮಳೆಯಾಗಿದೆ. ಕುಂದಾಪುರ, ಬೈಂದೂರಲ್ಲಿ ಕೆಲವೆಡೆ ಗುಡುಗು ಸಹಿತ ಮಳೆ ಬಿದ್ದಿದೆ.

ಕಾಪು ತಾಲೂಕಿನ ಶಿರ್ವದಲ್ಲಿ ಗಾಳಿ ಮಳೆಯಾಗಿದೆ. ಕೊರೊನಾ ವೈರಸ್‍ನಿಂದ ಲಾಕ್‍ಡೌನ್ ಆಗಿರುವುದರಿಂದ ನಾವು ಮಳೆಗಾಲಕ್ಕೆ ಹಸುವಿಗೆ ಈಗಲೇ ಬೈ ಹುಲ್ಲು ತಂದು ಮನೆಯಲ್ಲಿ ರಾಶಿ ಹಾಕಿದ್ದೆವು. ಹಟ್ಟಿಯಲ್ಲಿ ಅದನ್ನು ಜೋಡಿಸುವ ಮೊದಲೇ ಗಾಳಿ ಮಳೆ ಬಂದು ಬೈಹುಲ್ಲು ಒದ್ದೆಯಾಯಿತು. ಪೇಟೆಯಲ್ಲಿ ಕುಳಿತವರಿಗೆ ಮಳೆ ಖುಷಿಯಾಗಿರಬಹುದು. ಆದರೆ ನಮ್ಮಂತಹ ರೈತರಿಗೆ ಗಾಯದ ಮೇಲೆ ಬರೆ ಎಳೆದ ಹಾಗೆ ಆಗಿದೆ ಎಂದು ಶಿರ್ವ ಸಂದೀಪ್ ಭಟ್ರಾ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *