ನಿರಾಶ್ರಿತರ ಜೊತೆ ಹುಟ್ಟುಹಬ್ಬ – 2000 ಜನರಿಗೆ ಅನ್ನದಾನ ಮಾಡಿದ ನಿವೃತ್ತ ಬ್ಯಾಂಕ್ ಉದ್ಯೋಗಿ

ಉಡುಪಿ: ದೇಶವೇ ಲಾಕ್‍ಡೌನ್ ಆಗಿರುವುದರಿಂದ ಉಡುಪಿಯಲ್ಲಿರುವ ಬಡವರಿಗೆ, ನಿರಾಶ್ರಿತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಊಟಕ್ಕೆ ಸಮಸ್ಯೆಯಾಗಿದೆ. ಇದೇ ವೇಳೆ ನಿವೃತ್ತ ಬ್ಯಾಂಕ್ ಉದ್ಯೋಗಿ ತಮ್ಮ ಹುಟ್ಟುಹಬ್ಬದ ಪ್ರಯುಕ್ತ 2000 ಜನರಿಗೆ ಅನ್ನದಾನ ಮಾಡಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು, ಸಮಾಜ ಸೇವಕರು ಮೂರು ಹೊತ್ತಿನ ಊಟೋಪಚಾರ ವ್ಯವಸ್ಥೆ ಮಾಡುತ್ತಿದ್ದಾರೆ. ಈ ನಡುವೆ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿಯಾದ ಜಯರಾಮ್ ರಾವ್ ತಮ್ಮ 63ನೇ ಹುಟ್ಟುಹಬ್ಬವನ್ನು ನಿರಾಶ್ರಿತರ, ಕೂಲಿ ಕಾರ್ಮಿಕರ ಜೊತೆ ಆಚರಿಸಿದರು. ಅಲ್ಲದೇ ಸುಮಾರು 2000 ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಜಯರಾಮ್ ರಾವ್ ಮಾತನಾಡಿ. ನಾನು ಹುಟ್ಟುಹಬ್ಬ ಆಚರಿಸಿಲ್ಲ. ಆದರೆ ಈಗ ಜನ ಸಂಕಷ್ಟದಲ್ಲಿ ಇದ್ದಾರೆ. ಅವರಿಗೆ ಊಟ ಕೊಡುವ ಮನಸ್ಸಾಯ್ತು. ದೇಶ ಹಸಿವಿನಿಂದ ಇರುವಾಗ ನಾವು ಮನೆಯಲ್ಲಿ ಸಿಹಿಯೂಟ ಮಾಡುವುದು ಎಷ್ಟು ಸರಿ ಎಂಬ ಆಲೋಚನೆ ಬಂತು. ಆಗ ಗಣೇಶೋತ್ಸವ ಸಮಿತಿಯನ್ನು ಸಂಪರ್ಕಿಸಿದೆ. ಅವರ ಮೂಲಕ ಜನರಿಗೆ ಊಟದ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.

ಜಯರಾಮ್ ಅವರಿಂದ ವಿತರಣೆಯಾದ ಊಟ ಹಸಿದ ಹೊಟ್ಟೆಗೆ ಸೇರಿದೆ. ಸಂಕಷ್ಟದ ಈ ಸ್ಥಿತಿಯಲ್ಲಿ ದಾನಿಗಳು ಮುಂದೆ ಬಂದರೆ ಸರ್ಕಾರಕ್ಕೆ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಉಡುಪಿ ನಗರದ 10 ಕಡೆ ಮಧ್ಯಾಹ್ನದ ಅನ್ನದಾನ ಮಾಡಿ ವಿಶೇಷ ರೀತಿಯಲ್ಲಿ ಸದಾಕಾಲ ನೆನಪಿನಲ್ಲಿ ಇರುವಂತೆ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜಯರಾಮ್ ಅವರ ಪತ್ನಿ ವೀಣಾ ರಾವ್ ಜೊತೆಗಿದ್ದು, ಊಟ ವಿತರಣೆ ಮಾಡಿದರು. ಕಡಿಯಾಳಿ ಗಣೇಶೋತ್ಸವ ಸಮಿತಿ ಮೂಲಕ ಅನ್ನದಾನ ಮಾಡಿದ್ದು, ವ್ಯವಸ್ಥಾಪಕ ಮಂಜುನಾಥ್ ಹೆಬ್ಬಾರ್, ಶಾಸಕ ರಘುಪತಿ ಭಟ್, ಮೇಲ್ವಿಚಾರಕ ರಾಘವೇಂದ್ರ ಕಿಣಿ, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *