ಕೊರೊನಾ ಪಾಸಿಟಿವ್ ವ್ಯಕ್ತಿ ಗುಣಮುಖ: ಶೆಟ್ಟರ್

ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇದ್ದ ವ್ಯಕ್ತಿ ಬಹುತೇಕ ಗುಣಮುಖರಾಗಿದ್ದು, ಮೂರು ಸಲದ ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ. ಇನ್ನೊಂದು ಸಲದ ಪರೀಕ್ಷೆ ಮಾತ್ರವೇ ಬಾಕಿ ಉಳಿದಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರೇ ಈ ವಿಷಯವನ್ನು ಹೇಳಿದ್ದಾರೆ.

ಧಾರವಾಡದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದ 21 ಪಾಸಿಟಿವ್ ಪ್ರಕರಣವಾಗಿದ್ದ ಧಾರವಾಡ ವ್ಯಕ್ತಿಯ ಚೇತರಿಕೆಯ ವಿಚಾರ ಹಂಚಿಕೊಂಡರು. ಧಾರವಾಡ ಕೊರೊನಾ ಪಾಸಿಟಿವ್ ವ್ಯಕ್ತಿ ಗುಣಮುಖರಾಗಿದ್ದಾರೆ. ಮೂರನೇ ಹಂತದ ಪ್ರಯೋಗಾಲಯ ಪರೀಕ್ಷೆಯಲ್ಲಿ ಆ ವ್ಯಕ್ತಿಯ ಫಲಿತಾಂಶ ನೆಗಟಿವ್ ಬಂದಿದೆ. ಇನ್ನೊಂದು ಸಲ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡುತ್ತೇವೆ. ಆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದು, ಸದ್ಯ ಆ ವ್ಯಕ್ತಿ ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಹೇಳಿದ್ರು.

ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಧಾರವಾಡದ 34 ಜನ ಪಾಲ್ಗೊಂಡಿದ್ದರು. ಅದರಲ್ಲಿ 17 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 17 ಜನರ ವರದಿ ಬರಬೇಕಿದೆ. ಕಿಮ್ಸ್‍ನಲ್ಲಿ ತಬ್ಲಿಘಿಗಳ ಆಶಿಸ್ತು ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ 50 ಸಾವಿರ ಕುಟುಂಬಗಳಿಗೆ ಉಚಿತ ಹಾಲು ನೀಡುತ್ತಿದ್ದೇವೆ. ಸ್ಲಂ ಮತ್ತು ಕಾರ್ಮಿಕರಿಗೆ ಅರ್ಧ ಲೀಟರ್ ಹಾಲು ಇಂದಿನಿಂದ ಆರಂಭವಾಗಿದೆ. ತರಕಾರಿ ಮನೆಗೆ ಮನೆಗೆ ತಲುಪಿಸುವಲ್ಲಿ ಧಾರವಾಡ ಯಶಸ್ವಿಯಾಗಿದೆ ಎಂದ ಶೆಟ್ಟರ್, ದಿನಸಿ ಕೂಡ ಹೋಮ್ ಡಿಲಿವರಿ ಮಾಡುತ್ತಿದ್ದೇವೆ ಎಂದರು.

ಪೊಲೀಸ್ ಲಾಠಿ ಚಾರ್ಜ್ ಸಂಬಂಧ ಮಾತನಾಡಿದ ಅವರು, ಜನ ಸ್ವಯಂ ಪ್ರೇರಿತನಾಗಿ ಮನೆಯಲ್ಲಿರಬೇಕು. ಜನ ಮನೆಯಲ್ಲಿದ್ದರೆ ಪೊಲೀಸ್ ಲಾಠಿ ಎತ್ತುವ ಪ್ರಸಂಗ ಬರುವುದಿಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಬಲ ಪ್ರಯೋಗ ಮಾಡಲೇ ಬೇಕಾಗುತ್ತಿದೆ. ಪ್ರಧಾನಿ ಮೋದಿಯವರ ವಿಡಿಯೋ ಸಂದೇಶದ ವಿಚಾರವನ್ನು ಯಾರೂ ಕೂಡ ರಾಜಕೀಯ ಮಾಡಬಾರದು ಎಂದ ಶೆಟ್ಟರ್, ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಮೂವರ ಸಫಾಯಿ ಕರ್ಮಚಾರಿಗಳನ್ನು ಕೈ ಬಿಡುವ ವಿಚಾರದ ಬಗ್ಗೆ ಜಿಲ್ಲಾಧಿಕಾರಿ ನೋಡಿ ಕ್ರಮ ಕೈಗೊಳ್ಳುತ್ತಾರೆ ಎಂದರು.

Comments

Leave a Reply

Your email address will not be published. Required fields are marked *