ಮೂರು ದಿನದಲ್ಲಿ ಪಿಎಂ ಕೇರ್ಸ್ ನಿಧಿಗೆ 7,314 ಕೋಟಿ ರೂ. ಜಮೆ

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಮಾರ್ಚ್ ಕೊನೆಯಲ್ಲಿ ಪ್ರಾರಂಭವಾದ ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿ (ಪಿಎಂ ಕೇರ್ಸ್ ಫಂಡ್)ಗೆ ಕೇವಲ ಮೂರು ದಿನಗಳಲ್ಲಿ 7,314 ಕೋಟಿ ರೂ. ದೇಣಿಗೆ ಜಮೆಯಾಗಿದೆ.

ಕೋವಿಡ್-19 ಭೀತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಮಾರ್ಚ್ 28ರಂದು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿಯನ್ನು ರಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಪಿಎಂ ಕೇರ್ಸ್ ಗೆ ಉದಾರವಾಗಿ ದೇಣಿಗೆ ನೀಡಬೇಕೆಂದು ಜನತೆಗೆ ಮನವಿ ಮಾಡಿಕೊಂಡಿದ್ದರು.

ಪ್ರಧಾನಿ ಮೋದಿ ಅವರ ಮನವಿಯ ನಂತರ, ಬಾಲಿವುಡ್ ಸೆಲೆಬ್ರಿಟಿಗಳು, ಕ್ರೀಡಾಪಟುಗಳು, ಕ್ರಿಕೆಟ್ ಆಟಗಾರರು, ಉದ್ಯಮಿಗಳು ಸೇರಿದಂತೆ ಹಲವಾರು ಗಣ್ಯರು ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದಾನಿ ಗ್ರೂಪ್‍ನಂತಹ ಕಾರ್ಪೋರೇಟ್ ಸಂಸ್ಥೆಗಳು ಸಹ ತುರ್ತು ನಿಧಿಗೆ ತಮ್ಮ ಪಾಲನ್ನು ನೀಡಿವೆ.

ಸಿಎಂ ಕೇರ್ಸ್ ನಿಧಿಗೆ ಸಾಮಾನ್ಯ ನಾಗರಿಕರು, ಸೆಲೆಬ್ರಿಟಿಗಳು ಮತ್ತು ಉದ್ಯಮಗಳಿಂದ ಮೂರು ದಿನಗಳಲ್ಲಿ 7,300 ಕೋಟಿ ರೂ. ಹರಿದು ಬಂದಿದೆ. ಈ ನಿಧಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಗ್ರೂಪ್ 1,500 ಕೋಟಿ ರೂ., ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್‍ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ. ದೇಣಿಗೆ ಸೇರಿದೆ.

ಸಚಿನ್ ತೆಂಡೂಲ್ಕರ್, ಸುರೇಶ್ ರೈನಾ, ಗೌತಮ್ ಗಂಭೀರ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್, ಪವನ್ ಕಲ್ಯಾಣ್ ಮತ್ತು ಸೋನಮ್ ಕಪೂರ್ ಸೇರಿದಂತೆ ಖ್ಯಾತನಾಮರು ದೇಣಿಗೆ ನೀಡಿದ್ದಾರೆ. ಇವರಲ್ಲದೆ ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಎಲ್ಲರೂ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

ದೇಶದಲ್ಲಿ ಈವರೆಗೆ 1,900ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂತಗುಲಿದ್ದು, 53 ಜನರು ಸಾವನ್ನಪ್ಪಿದ್ದಾರೆ. ವಿಶ್ವಾದ್ಯಂತ 8.50 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಸುಮಾರು 42 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *