ಮೂರು ದಿನಗಳ ಲಾಕ್‍ಡೌನ್ ಸಡಿಲಿಕೆ- ದ.ಕ.ದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಮಂಗಳೂರು: ದಕ್ಷಿಣ ಕನ್ನಡದಲ್ಲಿ 7 ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮೂರು ದಿನಗಳ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿತ್ತು. ಇಂದು ತರಕಾರಿ, ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದ್ದು, ಜನ ಕೊಳ್ಳಲು ಮುಗಿಬಿದ್ದಿದ್ದಾರೆ. ಖುರ್ಚಿ ಹಾಕಿಕೊಂಡು ಕ್ಯೂ ನಿಂತು ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಇಂದು ಅಗತ್ಯವಸ್ತು ಖರೀದಿಗೆ ಅವಕಾಶ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಭಾರೀ ಸಂಖ್ಯೆಯಲ್ಲಿ ಜನ ಮನೆಯಿಂದ ಹೊರಬಂದಿದ್ದು, ದಿನಸಿ, ತರಕಾರಿ ಅಂಗಡಿಗಳ ಮುಂದೆ ಭಾರೀ ಕ್ಯೂ ಉಂಟಾಗಿದೆ. ಕುರ್ಚಿ ಹಾಕಿಕೊಂಡು ಸರತಿಯಲ್ಲಿ ಕುಳಿತು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ಭಾರೀ ಸಂಖ್ಯೆಯ ವಾಹನಗಳು ರಸ್ತೆಗಿಳಿದಿದ್ದು, ಸಂಚಾರ ದಟ್ಟಣೆ ಉಂಟಾಗಿದೆ. ಮಂಗಳೂರಿನ ಕದ್ರಿ ಬಳಿಯಿರುವ ಮಲ್ಲಿಕಟ್ಟೆ ಮಾರುಕಟ್ಟೆಯಲ್ಲಿ ಭಾರೀ ಕ್ಯೂ ಉಂಟಾಗಿದೆ. ದಿನಸಿ, ತರಕಾರಿ, ಹಾಲು, ಪೇಪರ್ ಖರೀದಿಗೆ ಜನ ಸಾಲುಗಟ್ಟಿ ನಿಂತಿದ್ದಾರೆ.

ಮಾಂಸ ಖರೀದಿಗೂ ಸಹ ಜನ ಮುಗಿಬಿದ್ದಿದ್ದು, ಸರತಿಯಲ್ಲಿ ನಿಂತು ಖರೀದಿಸುತ್ತಿದ್ದಾರೆ. ಚಿಕನ್, ಮಟನ್ ಖರೀದಿಗೆ ಮುಗಿಬಿದ್ದಿದ್ದಾರೆ. ಕಳೆದ ಮೂರು ದಿನಗಳಿಂದ ಮಾಂಸ ಸಿಗದ್ದಕ್ಕೆ ಭಾರೀ ಡಿಮ್ಯಾಂಡ್ ಉಂಟಾಗಿದ್ದು, ಮಲ್ಲಿಕಟ್ಟೆ ಮಾರುಕಟ್ಟೆಯಲ್ಲಿ ಮಾಂಸ ಮಾರಾಟ ಜೋರಾಗಿ ನಡೆದಿದೆ. ಮೀನುಗಾರಿಕೆ ಬಂದ್ ಆಗಿರುವುದರಿಂದ ಮೀನುಗಳು ಸಿಗುತ್ತಿಲ್ಲ. ಹೀಗಾಗಿ ಜನತೆ ಚಿಕನ್, ಮಟನ್ ಮೊರೆ ಹೋಗಿದ್ದಾರೆ. ಇದರಿಂದಾಗಿ ಬೇಡಿಕೆ ಹೆಚ್ಚಾಗಿದೆ.

Comments

Leave a Reply

Your email address will not be published. Required fields are marked *