ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕನ ಪುತ್ರಿ ಆತ್ಮಹತ್ಯೆಗೆ ಶರಣು

ಜೈಪುರ: ಮಧ್ಯಪ್ರದೇಶ ಕಾಂಗ್ರೆಸ್‍ನ ಬಂಡಾಯ ಶಾಸಕ ಸುರೇಶ್ ಧಾಕಾಡ್ ಅವರ ಪುತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ರಾಜಸ್ಥಾನದ ಬರಾನ್ ಜಿಲ್ಲೆಯ ಗಂಡನ ಮನೆಯಲ್ಲಿ ಜ್ಯೋತಿ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ಖೆದಾ ಗ್ರಾಮದ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುತ್ತಿಗೆಯ ಬಳಿ ಗಾಯದ ಗುರುತುಗಳಿವೆ.

ಗುರುವಾರ ಹಾಗೂ ಶುಕ್ರವಾರದ ಮಧ್ಯರಾತ್ರಿ ಘಟನೆ ನಡೆದಿದೆ ಎಂದು ಕೇಲ್ವಾಡಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಈ ಕುರಿತು ತನಿಖೆ ಪ್ರಾರಂಭಿಸಲಾಗುತ್ತಿದೆ. ಮಹಿಳೆಯ ಅಳಿಯಂದಿರ ಪೈಕಿ ಯಾರೂ ಪೊಲೀಸರೊಂದಿಗೆ ಮಾತನಾಡುತ್ತಿಲ್ಲ. ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ನಂದ್ ಸಿಂಗ್ ಮಾಹಿತಿ ನೀಡಿದ್ದಾರೆ.

ಯುವತಿಯ ತಂದೆ ಸುರೇಶ್ ಧಾಕಡ್ ಅವರು ಮಧ್ಯಪ್ರದೇಶದ ಪೊಹ್ಹರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಮಧ್ಯಪ್ರದೇಶದ ಕಾಂಗ್ರೆಸ್‍ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದ 22 ಜನ ರೆಬೆಲ್ ಕಾಂಗ್ರೆಸ್ ಶಾಸಕರ ಪೈಕಿ ಇವರೂ ಒಬ್ಬರಾಗಿದ್ದಾರೆ.

ಜ್ಯೋತಿ ಅವರು ಡಾ.ಜೈ ಸಿಂಗ್ ಮೆಹ್ತಾ ಅವರನ್ನು ವಿವಾಹವಾಗಿದ್ದರು. ಡಾ.ಜೈ ಸಿಂಗ್ ಶಹಾಬಾದ್‍ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕುಟುಂಬ ಬರಾನ್ ಜಿಲ್ಲೆಯ ಬಸ್ಖೇದಾ ಗ್ರಾಮದಲ್ಲಿ ವಾಸವಾಗಿತ್ತು. ದಂಪತಿಗೆ ಎರಡು ವರ್ಷದ ಒಂದು ಮಗುವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *