ಬೆಂಗಳೂರು ಖಾಲಿ ಮಾಡಿದ 5 ಲಕ್ಷ ಮಂದಿ

ಬೆಂಗಳೂರು: ಸಿಲಿಕಾನ್ ಸಿಟಿ ಕೊರೊನಾ ಬಲೆಯಲ್ಲಿ ಸಿಲುಕಿದಂತೆ ಭಾಸವಾಗುತ್ತಿದೆ. ಯಾಕಂದರೆ ಕೊರೊನಾ ಎಮರ್ಜೆನ್ಸಿ ವಿಧಿಸಿದ ಮೂರನೇ ದಿನವೂ ಹೆಚ್ಚುಕಡಿಮೆ ಶನಿವಾರ-ಭಾನುವಾರದ ಪರಿಸ್ಥಿತಿಯನ್ನು ನೆನಪಿಸಿದೆ. ಇವತ್ತು ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ತೆರೆದಿದ್ರೂ, ಹೆಚ್ಚಿನ ವ್ಯವಹಾರ ನಡೆಯಲಿಲ್ಲ. ಕಾರಣ ಮಾಮೂಲಿಯಂತೆ ಜನರು ಹೊರಗೆ ಬಂದಿರಲಿಲ್ಲ.

ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‍ಗಳು, ನಮ್ಮ ಮೆಟ್ರೋ ರೈಲುಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಕೆಎಸ್ಆರ್‌ಟಿಸಿಗೆ ವಾರದಲ್ಲಿ 3 ಕೋಟಿ ರೂ. ನಷ್ಟವಾಗಿದೆ. ಕೊರೊನಾ ಭೀತಿಗೆ ತತ್ತರಿಸಿರುವ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಜನತೆ ಶನಿವಾರ-ಭಾನುವಾರ ಬೆಂಗಳೂರು ಬಿಟ್ಟಿದ್ದಾರೆ. ತಾತ್ಕಾಲಿಕ ಅವಧಿಗೆ ಸರಿಸುಮಾರು 5 ಲಕ್ಷ ಮಂದಿ ಬೆಂಗಳೂರು ತೊರೆದು, ತಮ್ಮ ಸ್ವ-ಗ್ರಾಮಗಳಿಗೆ ತೆರಳಿದ್ದಾರೆ ಎಂದು ಅಂದಾಜಿಸಲಾಗಿದೆ.

ಸದಾ ಗಿಜಿಗುಡುವ ಎಂಜಿ ರೋಡ್, ಚರ್ಚ್ ಸ್ಟ್ರೀಟ್‍ಗಳು ಖಾಲಿ ಹೊಡೆಯುತ್ತಿವೆ. ಬಹುತೇಕ ಐಟಿ-ಬಿಟಿ ಸಂಸ್ಥೆಗಳು ವರ್ಕ್ ಫ್ರಂ ಹೋಮ್‍ಗೆ ಮೊರೆ ಹೋಗಿವೆ. ಆದರೆ ಪಾರ್ಕ್ ಗಳಿಗೆ ಮಾತ್ರ ಜನ ಎಂದಿನಂತೆ ಬರುತ್ತಿದ್ದಾರೆ. ವಾಹನಗಳ ಸಂಚಾರ ಕೂಡ ಕಡಿಮೆಯಾಗಿದೆ. ಈಗಾಗಲೇ ಶಾಲಾ-ಕಾಲೇಜಿಗೂ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಜನರು ತಮ್ಮ ಮಕ್ಕಳನ್ನ ಕರೆದುಕೊಂಡು ಸ್ವ-ಗ್ರಾಮಗಳಿಗೆ ತೆರಳಿದ್ದಾರೆ. ಇನ್ನೂ ಮೂಲ ಬೆಂಗಳೂರಿಗರು ಮಾತ್ರ ಮನೆಯಿಂದ ಹೊರಬಂದಿಲ್ಲ.

ಈಗಾಗಲೇ ಆರೋಗ್ಯ ಇಲಾಖೆ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಯಾರಿಗಾದರೂ ಕೆಮ್ಮು, ಶೀತ, ಜ್ವರ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ಇವತ್ತು ವಾರದ ಮೊದಲ ದಿನ ಸೋಮವಾರ ರೈಲ್ವೆ ನಿಲ್ದಾಣಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿರುತ್ತೆ. ಆದರೆ ಕೊರೊನಾ ವೈರಸ್ ಭೀತಿಯಿಂದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಇತ್ತ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಮತ್ತಷ್ಟು ಬಿಕೋ ಎನ್ನುತ್ತಿದೆ. ಪ್ರಯಾಣಿಕರ ಸಂಖ್ಯೆ ಶೇ. 80 ರಷ್ಟು ಇಳಿಕೆ ಕಂಡಿದೆ.

ಶಿವಾಜಿ ನಗರದಲ್ಲಿರುವ ರಸೆಲ್ ಮಾರ್ಕೆಟ್ ಸಂಪೂರ್ಣ ಖಾಲಿ ಖಾಲಿಯಾಗಿತ್ತು. ಅಂಗಡಿಗಳು ಓಪನ್ ಇದ್ದರೂ ಗ್ರಾಹಕರು ಮಾತ್ರ ಇತ್ತ ಸುಳಿಯಲೇ ಇಲ್ಲ. ಇದಕ್ಕೆ ಹೂ, ತರಕಾರಿ ವ್ಯಾಪಾಸ್ಥರು ಬೇಸರ ವ್ಯಕ್ತಪಡಿಸಿದ್ದರು.

 

Comments

Leave a Reply

Your email address will not be published. Required fields are marked *