ಗರ್ಭಿಣಿಗಾಗಿ ನಟ ಜಗ್ಗೇಶ್ ಮನವಿ

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಗರ್ಭಿಣಿಗಾಗಿ ಕರ್ನಾಟಕ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ, ರೋಮ್‍ನಲ್ಲಿ ಭಾರತೀಯ ಮೂಲದ ಗರ್ಭಿಣಿ ಪಡುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಮಹಿಳೆಗೆ ಸಹಾಯ ಮಾಡುವಂತೆ ಕರ್ನಾಟಕ ಸರ್ಕಾರ, ಆರೋಗ್ಯ ಸಚಿವ ಶ್ರೀರಾಮುಲು ಅವರ ಬಳಿ ಸಹಾಯ ಕೇಳಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
ನಾನು ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಒಂದು ಮನವಿ ಮಾಡಿಕೊಳ್ಳುತ್ತೇನೆ. ಬೆಂಗಳೂರು ಮೂಲದ ಗರ್ಭಿಣಿ ರೋಮ್‍ನಲ್ಲಿ ಕಷ್ಟಪಡುತ್ತಿದ್ದಾರೆ. ನಾನು ಇದುವರೆಗೂ ಆ ಮಹಿಳೆಯನ್ನು ಭೇಟಿ ಮಾಡಿಲ್ಲ. ಆದರೆ ನನಗೆ ಅವರ ಪರಿಸ್ಥಿತಿ ನೋಡಿ ತುಂಬಾ ಬೇಸರವಾಗುತ್ತಿದೆ. ಮಹಿಳೆಗೆ ಈಗ ಹೆರಿಗೆ ನೋವು ಶುರುವಾಗಿದ್ದು, ಭಾರತಕ್ಕೆ ಹಿಂದಿರುಗಲು ಬಯಸುತ್ತಿದ್ದಾರೆ. ಆದರೆ ಮಂಜೂರಾತಿ ಪಡೆಯಲು ಕನಿಷ್ಠ ಏಳು ದಿನಗಳು ತೆಗೆದುಕೊಳ್ಳುತ್ತದೆ ಎಂದು ಸರ್ಕಾರ ಹೇಳುತ್ತಿದೆ.

ನಾನು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಇದರಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ. ಅಲ್ಲದೆ ಮಹಿಳೆ ಭಾರತಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರದ ಬಳಿ ವಿನಂತಿ ಮಾಡಿಕೊಳ್ಳುತ್ತೇನೆ. ಮಹಿಳೆ ಭಾರತದಲ್ಲಿ ಚಿಕಿತ್ಸೆ ಪಡೆಯಲು ಸಿದ್ಧರಾಗಿದ್ದಾರೆ. ಆದರೆ ಇಟಲಿಯಲ್ಲಿ ಸಾಯಲು ಸಿದ್ಧವಾಗಿಲ್ಲ. ನಮಗೆ ನಮ್ಮ ಸರ್ಕಾರದ ಮೇಲೆ ನಂಬಿಕೆ ಇದೆ. ಅವರ ನಿರಂತರ ಪ್ರಯತ್ನಗಳನ್ನು ನಾನು ಪ್ರಶಂಶಿಸುತ್ತೇನೆ. ಆದರೆ ಗರ್ಭಿಣಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಾನು ಸುಷ್ಮಾ ಸ್ವರಾಜ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರು ಒಂದು ಟ್ವೀಟ್ ಮಾಡಿದರೆ ಸಾಕು ಭಾರತೀಯರು ಎಲ್ಲಿಯೇ ಇದ್ದರೂ ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗುತ್ತಿದ್ದರು ಎಂದು ಜಗ್ಗೇಶ್ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನೆನಪಿಸಿಕೊಂಡಿದ್ದಾರೆ.

ಜಗ್ಗೇಶ್ ಅವರು ಟ್ವೀಟ್‍ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು, ಈ ಬಗ್ಗೆ “ನಾವು ಕಾಳಜಿ ವಹಿಸುತ್ತೇವೆ. ಧನ್ಯವಾದಗಳು” ಎಂದು ರೀ-ಟ್ವೀಟ್ ಮಾಡಿದ್ದಾರೆ. ಇದಕ್ಕೆ ಜಗ್ಗೇಶ್ ಅವರು, “ನೀವು ತಕ್ಷಣ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು” ಎಂದು ಬರೆದು ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *