ಬಿಜೆಪಿ ನಾಯಕರಿಗೆ, ಕೇಂದ್ರ ಸಚಿವರು, ರಾಜ್ಯ ಸಚಿವರಿಗೆ ಕೊರೊನಾ ಭಯ!

ಬೆಂಗಳೂರು: ಕೊರೊನಾಗೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಕೊರೊನಾ ಸೋಂಕಿನಿಂದ ಎಚ್ಚರ ವಹಿಸಲು ರಾಜ್ಯ ಸರ್ಕಾರ ಕೂಡ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಂಡಿದೆ. ಸಭೆ, ಸಮಾರಂಭಗಳನ್ನ ರದ್ದುಪಡಿಸಲು ಸೂಚನೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸಚಿವರು, ರಾಜ್ಯ ಸಚಿವರು, ಬಿಜೆಪಿ ನಾಯಕರು ಕೊರೊನಾಗೆ ಬೆಚ್ಚಿದ್ದು, ತಮ್ಮ ತಮ್ಮ ಕಾರುಗಳಲ್ಲಿ ಸ್ಯಾನಿಟೈಸರ್ ಇಡುವುದು ಕಡ್ಡಾಯ ಮಾಡಿದ್ದಾರೆ.

ಅಂದಹಾಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಇತ್ತು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಗೆ ಕೇಂದ್ರ ಸಚಿವರಾದ ಡಿವಿಎಸ್, ಪ್ರಹ್ಲಾದ್ ಜೋಶಿ ಬಂದಿದ್ರು. ಕೋರ್ ಕಮಿಟಿ ಸದಸ್ಯರಾಗಿರುವ ಸಿಎಂ ಯಡಿಯೂರಪ್ಪ ಸೇರಿದಂತೆ ಅವರ ಕ್ಯಾಬಿನೆಟ್‍ನ ಕೆಲವು ಸಚಿವರು ಸಭೆಯಲ್ಲಿ ಭಾಗವಹಿಸಿದ್ರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೂ ಪ್ರವೇಶ ನಿರಾಕರಿಸಲಾಗಿತ್ತು. ಅಲ್ಲದೆ ಬಿಜೆಪಿ ಕಚೇರಿ ಮುಂಭಾಗ ಸಭೆ ಮುಗಿಯುವ ತನಕ ರಸ್ತೆ ಬಂದ್ ಮಾಡಲಾಗಿತ್ತು. ಈ ನಡುವೆ ಕೇಂದ್ರ ಸಚಿವರ ಕಾರು, ರಾಜ್ಯ ಸಚಿವರ ಕಾರು, ಬಿಜೆಪಿ ರಾಜ್ಯಾಧ್ಯಕ್ಷರ ಕಾರಿನಲ್ಲಿ ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಇಡಲಾಗಿತ್ತು. ಕಾರು ಹತ್ತುವ ಮುನ್ನ ಸಚಿವರುಗಳು ಸ್ಯಾನಿಟೈಸರ್ ಬಳಸುತ್ತಿದ್ದು ಸಾಮಾನ್ಯವಾಗಿತ್ತು.

ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಕೊರೊನಾ ಸೋಂಕಿನ ಕ್ರಮಗಳ ಬಗ್ಗೆ ಚರ್ಚಿಸಲಾಯ್ತು. ಬಿಜೆಪಿ ಕಾರ್ಯಕರ್ತರನ್ನ ಬಳಸಿಕೊಂಡು ಜಾಗೃತಿ ಮೂಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಅಂತಾ ಕೋರ್ ಕಮಿಟಿ ಸದಸ್ಯ ಅರವಿಂದ್ ಲಿಂಬಾವಳಿ ಹೇಳಿದ್ದಾರೆ. ಕೋರ್ ಕಮಿಟಿ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಕೊರೊನಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಬಗ್ಗೆ ಸಮಾಧಾನ ವ್ಯಕ್ತಪಡಿಸಿದೆ ಎಂದರು.

ಕೊರೊನಾ ಬಗ್ಗೆ ಎಲ್ಲಾ ಹಂತದ ಕಾರ್ಯಕರ್ತರರಿಂದ ಜಾಗೃತಿಗೆ ಸೂಚನೆ ಕೊಟ್ಟಿದ್ದೇವೆ. ದೊಡ್ಡ ದೊಡ್ಡ ಸಭೆಗಳು ನಡೆಸಬಾರದು ಎಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *