ಡಿಕೆಶಿ ಕೈ ಕುಲುಕಿ ಅಭಿನಂದನೆ ಸಲ್ಲಿಸಿದ ಕುಖ್ಯಾತ ರೌಡಿ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಸಾರಥಿ ಡಿ.ಕೆ.ಶಿವಕುಮಾರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿನಂದನೆ ನೆಪದಲ್ಲಿ ಮಂಡ್ಯ ನಗರದ ಕುಖ್ಯಾತ ರೌಡಿಶೀಟರ್ ಒಬ್ಬ ಡಿ.ಕೆ.ಶಿವಕುಮಾರ್ ಅವರ ಕೈ ಕುಲುಕಿ ವಿಶ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ರೌಡಿಶೀಟರ್ ಶಿವಕುಮಾರ್ ಆಲಿಯಾಸ್ ಡೇಂಜರ್ ಶಿವ ಹಾಗೂ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿರುವ ರೌಡಿಯ ಪತ್ನಿ ರಶ್ಮಿ ಡಿಕೆ ಶಿವಕುಮಾರ್ ಅವರಿಗೆ ಬೊಕ್ಕೆ ನೀಡಿ ಶುಭಕೋರಿದ್ದಾರೆ. ಶಿವನ ವಿರುದ್ಧ ಮಂಡ್ಯ ನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಎಚ್.ಪಿ.ನಾಗೇಂದ್ರ ಹತ್ಯೆ ಆರೋಪ ಪ್ರಕರಣದಲ್ಲಿ ಜೈಲುಪಾಲಾಗಿ ಜೀವಾವಧಿ ಶಿಕ್ಷೆಗೂ ಶಿವ ಒಳಗಾಗಿದ್ದ. ಕಾನೂನು ಹೋರಾಟ ನಡೆಸಿ ಅಧೀನ ನ್ಯಾಯಾಲಯ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಅಲ್ಲಿ ಜಾಮೀನು ಪಡೆದು ಹೊರಬಂದಿದ್ದ.

ಇತ್ತೀಚೆಗೆ ಮಂಡ್ಯದಲ್ಲಿ ಡೇಂಜರ್ ಶಿವ ಸೇರಿದಂತೆ 38 ರೌಡಿಗಳನ್ನು ಗಡಿಪಾರು ಮಾಡುವಂತೆ ಮಂಡ್ಯ ಪೊಲೀಸರು ಜಿಲ್ಲಾಡಳಿತಕ್ಕೆ ಶಿಫಾರಸ್ಸು ಕೂಡ ಮಾಡಿದ್ದರು. ರಾಜಕೀಯ ಒತ್ತಡ ಹಾಗೂ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಶ್ಯೂರಿಟಿ ನೀಡಿ ಗಡಿಪಾರಿನಿಂದ ಬಚಾವ್ ಆಗಿದ್ದ. ಆದರೆ ಇದೀಗ ರೌಡಿಯೊಬ್ಬ ಹಿರಿಯ ರಾಜಕಾರಣಿ ಮನೆಯಲ್ಲಿ ಕಾಣಿಸಿಕೊಂಡಿರುವುದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ.

Comments

Leave a Reply

Your email address will not be published. Required fields are marked *