ಹೆಚ್.ಡಿ.ರೇವಣ್ಣ ಮತ್ತು ರಮೇಶ್ ಜಾರಕಿಹೊಳಿ ಮಾತುಕತೆ ರಹಸ್ಯ!

ಬೆಂಗಳೂರು: ಬೆಳಗಾವಿ ಸಾಹುಕಾರ ಸ್ವಲ್ಪ ಸಾಫ್ಟ್ ಆಗ್ತಿದ್ದಾರೆ. ನಿನ್ನೆಯಷ್ಟೇ ಸಿದ್ದರಾಮಯ್ಯ ಅವರನ್ನ ಮೊಗಸಾಲೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದ ಸಚಿವ ರಮೇಶ್ ಜಾರಕಿಹೊಳಿ ಇವತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜತೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು. ವಿಧಾನಸಭೆ ಕಲಾಪವನ್ನು ಮುಂದೂಡಿದ್ದಾಗ ಮಾತುಕತೆ ನಡೆಸಿದ್ದು ಕುತೂಹಲ ಹುಟ್ಟುಹಾಕಿತ್ತು.

ವಿಧಾನಸಭೆಯಲ್ಲಿ ಇವತ್ತು ಸಚಿವ ಸುಧಾಕರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಜಟಾಪಟಿಯಿಂದಾಗಿ ಕಲಾಪವನ್ನ 10 ನಿಮಿಷ ಮುಂದೂಡಲಾಗಿತ್ತು. ಆಗ ಸದನದಲ್ಲಿಯೇ ಇದ್ದ ಹೆಚ್.ಡಿ.ರೇವಣ್ಣ ಅವರ ಆಸನದ ಬಳಿ ತೆರಳಿದ ಸಚಿವ ರಮೇಶ್ ಜಾರಕಿಹೊಳಿ ಸುಮಾರು 10 ನಿಮಿಷ ಮಾತಕತೆ ನಡೆಸಿದರು.

ರಮೇಶ್‍ಕುಮಾರ್, ಸುಧಾಕರ್ ಜಟಾಪಟಿಯ ಬಗ್ಗೆ ಬಿಜೆಪಿ ಶಾಸಕರು ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ರೆ, ಇತ್ತ ರೇವಣ್ಣ ಜತೆ ಮಾತುಕತೆ ನಡೆಸಿದ್ದು ಎಲ್ಲರ ಗಮನ ಸೆಳೆಯಿತು. ಮಾತುಕತೆ ಬಳಿಕ ಹೊರಹೋಗುವಾಗ ಮಾಧ್ಯಮ ಗ್ಯಾಲರಿಯತ್ತ ಬಂದ ರೇವಣ್ಣ ಅವರನ್ನ ಏನ್ ಮಾತುಕತೆ ಅಂತಾ ಕೇಳಿದಾಗ,”ಅಯ್ಯೋ ಬಿಡಿ ಸರ್ ಅಂದ್ರು. ಏನು ಇಂಪಾರ್ಟೆಂಟ್ ಇಲ್ಲ, ಸುಮ್ನೆ ಮಾತಾಡಿದ್ವು. ನಮ್ ಕಂಡ್ರೆ ಅವರಿಗೆ ಏಕೆ ಪಾಪ ಭಯ” ಅಂತಾ ನಕ್ಕು ಹೊರಟ್ರು.

ಅಂದಹಾಗೆ ವಾರದ ಹಿಂದೆಯಷ್ಟೇ ಸಿಎಂ ಯಡಿಯೂರಪ್ಪ ಎಚ್ಚರಿಕೆ ಕೊಟ್ಟಿದ್ದರು. ಜಲಸಂಪನ್ಮೂಲ ಇಲಾಖೆಯ ಕಾರ್ಯನಿರ್ವಹಣೆಯನ್ನ ಎಚ್ಚರಿಕೆಯಿಂದ ಮಾಡಬೇಕು ಅಂದಿದ್ರಂತೆ. ಡಿ.ಕೆ.ಶಿವಕುಮಾರ್, ಹೆಚ್.ಡಿ.ರೇವಣ್ಣ ಅವರಿಗೆ ಇಲಾಖೆಯಲ್ಲಿ ಗ್ರಿಪ್ ಇದೆ. ಕೆಲ ಎಂಜಿನಿಯರ್ ಗಳು  ಚೆನ್ನಾಗಿ ಅವರಿಗೆ ಗೊತ್ತು. ಸ್ವಲ್ಪ ಎಚ್ಚರ ತಪ್ಪಿದ್ರೂ ಹಳ್ಳ ತೋಡುತ್ತಾರೆ ಅಂತಾ ಬಿಜೆಪಿಯಲ್ಲೂ ಹೆಚ್ಚು ಚರ್ಚೆ ಆಗ್ತಿತ್ತು. ಈ ಬೆನ್ನಲ್ಲೇ ರೇವಣ್ಣ ಜತೆ ಮಾತುಕತೆ ನಡೆಸಿರುವುದು ಸಾಕಷ್ಟು ರೆಕ್ಕೆಪುಕ್ಕಗಳಿಗೆ ಕಾರಣವಾಗಿದೆ.

Comments

Leave a Reply

Your email address will not be published. Required fields are marked *