ನಿನ್ನೆ 6, ಇಂದು 26ಕ್ಕೆ ಏರಿಕೆ – ವೇಗವಾಗಿ ದೇಶದಲ್ಲಿ ಹರಡುತ್ತಿದೆ ಕೊರೊನಾ

– ಕೇಂದ್ರ ಸರ್ಕಾರದಿಂದಲೇ ಅಧಿಕೃತ ಮಾಹಿತಿ
– ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ಹರ್ಷವರ್ಧನ್

ನವದೆಹಲಿ: ದೇಶದಲ್ಲಿ ಒಟ್ಟು 28 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಖಚಿತಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿರುವ ಅವರು, ಮಂಗಳವಾರ ಕೇವಲ 6 ಜನರಲ್ಲಿ ಮಾತ್ರ ಕೊರೊನಾ ವೈರಸ್ ಕಾಣಿಸಿಕೊಂಡಿತ್ತು. ಆದರೆ ಇತ್ತೀಚೆಗೆ ಕೇರಳದಲ್ಲಿ ಡಿಸ್ಚಾರ್ಜ್ ಆದ ಮೂವರು ಸೇರಿ ಇದೀಗ 28 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ.

ಕೇರಳದ ಮೂವರು ಡಿಸ್ಚಾರ್ಜ್ ಆದ ನಂತರ ದೆಹಲಿ 45 ವರ್ಷ ವ್ಯಕ್ತಿ ಹಾಗೂ ತೆಲಂಗಾಣ ಮೂಲದ 24 ವರ್ಷದ ಯುವಕನಲ್ಲಿ ಕಾಣಿಸಿಕೊಂಡಿತ್ತು. 24 ವರ್ಷದ ತೆಲಂಗಾಣದ ಟೆಕ್ಕಿ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದ. ಹೀಗಾಗಿ ಆತ ಸುತ್ತಾಡಿದ ಕಡೆ ಬೆಂಗಳೂರಿನಲ್ಲಿ ಕೆಲವು ಜನರಿಗೆ ಹರಡಿರಬಹುದು ಎಂದು ಶಂಕಿಸಲಾಗಿದೆ.

ವೈರಸ್ ಹೊಂದಿದ್ದ ದೆಹಲಿಯ ವ್ಯಕ್ತಿಯ ಸಂಪರ್ಕದಿಂದಾಗಿ ಆಗ್ರಾದ 6 ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಅಲ್ಲದೆ ಇಟಲಿಯ 16 ಜನ ಪ್ರವಾಸಿಗರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಇವರು ರಾಜಸ್ಥಾನ ನಂತರ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಚರಿಸಿದ್ದಾರೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

ಭಾರತದಲ್ಲಿರುವ 15 ಮಂದಿ ಇಟಲಿ ಪ್ರವಾಸಿಗರಿಗೆ ಕೊರೊನಾ ಸೋಂಕು ತಗುಲಿದೆ ಎಂದು ನವದೆಹಲಿಯ ಏಮ್ಸ್ ಆಸ್ಪತ್ರೆ ಅಧಿಕೃತವಾಗಿ ತಿಳಿಸಿತ್ತು. ಇಟಲಿಯಿಂದ ಬಂದ 21 ಮಂದಿಯನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 15 ಮಂದಿ ರಕ್ತದ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಅಂಶ ಕಂಡುಬಂದಿದೆ. ಇಟಲಿಯ ಪ್ರವಾಸಿಗರ ಗುಂಪಿನ ಸದಸ್ಯರನ್ನು ದೆಹಲಿಯ ಐಟಿಬಿಪಿ(ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್) ಕೇಂದ್ರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *