ಬಿಸಿಲನಾಡಲ್ಲಿ 5 ಲಕ್ಷ ಸಸಿ ನೆಡುವ ಅಭಿಯಾನ – ಪೊಲೀಸ್ ಇಲಾಖೆ ಕೆಲಸಕ್ಕೆ ಇಡೀ ನಗರವೇ ಸಾಥ್

ರಾಯಚೂರು: ಐದು ಲಕ್ಷ ಸಸಿಗಳನ್ನ ನೆಡುವ ಕಾರ್ಯಕ್ರಮ ಅಂಗವಾಗಿ ನಗರದಲ್ಲಿಂದು ಪೊಲೀಸ್ ಇಲಾಖೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಾವಿರಾರು ಬೀಜಗಳನ್ನ ನೆಡುವ ಕಾರ್ಯಕ್ರಮಕ್ಕೆ ಪೊಲೀಸ್ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಡೈರಿ ಹಾಲಿನ ಖಾಲಿ ಪ್ಯಾಕೆಟ್‍ಗಳಲ್ಲಿ, ನೀರಿನ ಬಾಟಲ್, ಅಡುಗೆ ಎಣ್ಣೆಯ ಪ್ಲಾಸ್ಟಿಕ್ ಪ್ಯಾಕೆಟ್‍ಗಳಲ್ಲಿ ಮಣ್ಣು ಗೊಬ್ಬರ ತುಂಬಿ ಬೀಜ ಹಾಕಿ ಸಸಿಗಳನ್ನು ತಯಾರಿಸುವ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ.ವೇದಮೂರ್ತಿ ಚಾಲನೆ ನೀಡಿದರು. ಜೊತೆಗೆ 186ನೇ ವಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನೂ ಮುಂದುವರಿಸಲಾಯಿತು.

ಈಗಾಗಲೇ ಬೇಸಿಗೆಯ ಬಿರು ಬಿಸಿಲು ಆರಂಭವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ತಾಪಮಾನ ಕಡಿಮೆಗೊಳಿಸಲು ನಾವು ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ಕೆ ಕೈ ಜೋಡಿಸಿದಲ್ಲಿ ಮುಂದಿನ ಮಳೆಗಾಲದ ವೇಳೆಗೆ ನಾವು ಐದು ಲಕ್ಷ ಸಸಿಗಳನ್ನು ಬೆಳೆಸುವ ಕಾರ್ಯ ಯಶಸ್ವಿಗೊಳಿಸಲು ಸಾಧ್ಯ ಎಂದು ವೇದಮೂರ್ತಿ ಹೇಳಿದರು.

ಜಿಲ್ಲಾ ಪೋಲಿಸ್ ಇಲಾಖೆ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ ಇಲಾಖೆ, ನಗರಸಭೆ, ಶಿಲ್ಪಾ ಫೌಂಡೇಶನ್, ಗ್ರೀನ್ ರಾಯಚೂರು ಮತ್ತು ರಾಯಚೂರು ನಗರದ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿವೆ. ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಚ್.ಆರ್. ಕುಮಾರ್, ಡಿ.ಎ.ಆರ್ ಪೊಲೀಸ್ ಉಪಾಧೀಕ್ಷಕರಾದ ಪ್ರಮಾನಂದ ಘೋಡ್ಕೆ ಮತ್ತು ಆರ್.ಪಿ.ಐ ಕೇದಾರನಾಥ ಭಾಗವಹಿಸಿದ್ದರು.

 

Comments

Leave a Reply

Your email address will not be published. Required fields are marked *