ನ್ಯಾಯಾಲಯದ ಸಂಕೀರ್ಣ ಲೋಕಾರ್ಪಣೆ ಮಾಡಿದ ಅಟೆಂಡರ್

– ಸರಳತೆ ಮೆರೆದ ಮುಖ್ಯನ್ಯಾಯಮೂರ್ತಿ

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣವನ್ನು ಅಟೆಂಡರ್ ಮೂಲಕ ಲೋಕಾರ್ಪಣೆ ಮಾಡಿಸಿ  ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಸರಳತೆ ಮೆರೆದಿದ್ದಾರೆ.

ನಿಗದಿತ ಕಾರ್ಯಕ್ರಮದಂತೆ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಕಟ್ಟಡದ ಟೇಪ್ ಕಟ್ ಮಾಡುವ ಮೂಲಕ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಲೋಕಾರ್ಪಣೆಗೊಳಿಸಬೇಕಿತ್ತು. ಆದರೆ ನ್ಯಾಯಾಲಯದ ಹಿರಿಯ ಅಟೆಂಡರ್ ಜಯರಾಜ ತ್ರಿಮೋತಿಯವರ ಕೈಯಲ್ಲಿ ಟೇಪ್ ಕಟ್ ಮಾಡಿಸಿ ಲೋಕಾರ್ಪಣೆ ಮಾಡಿಸಿದರು.

ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ಇತರೆ ನ್ಯಾಯಾಧೀಶರು, ಜಿಲ್ಲಾಧಿಕಾರಿ ಸಹ ಭಾಗವಹಿಸಿದ್ದರು. ನ್ಯಾಯಾಲಯದಲ್ಲೇ ಕೆಲಸ ಮಾಡುತ್ತಿದ್ದ ಹಿರಿಯ ಅಟೆಂಡರ್ ಆಗಿರುವ ಜಯರಾಜ್ ತ್ರಿಮೋತಿಯವರ ಕೈಯಲ್ಲಿ ಟೇಪ್ ಕಟ್ ಮಾಡಿಸಿ ಮುಖ್ಯ ನ್ಯಾಯಮೂರ್ತಿ ಸರಳತೆ ಮೆರೆದರು. ಅಲ್ಲದೆ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ ಅವರು ಪೊಲೀಸರ ಗೌರವ ವಂದನೆಯನ್ನು ಸಹ ಬೇಡವೆಂದು ಮೊದಲೇ ತಿಳಿಸಿದ್ದರು. ಮತ್ತೊಂದೆಡೆ ನ್ಯಾಯಾಲಯಗಳ ಸಂಕೀರ್ಣದ ಕಟ್ಟಡ ಉದ್ಘಾಟನೆ ವೇಳೆ ಆಡಂಬರ ಪ್ರದರ್ಶನ ಮಾಡಿ ದುಂದುವೆಚ್ಚ ಮಾಡಿ, ಸರ್ಕಾರದ ಹಣ ಪೋಲು ಮಾಡದಂತೆಯೂ ಸೂಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಮುಖ್ಯ ನ್ಯಾಯಮೂರ್ತಿಗಳು ಇತರರಿಗೆ ಮಾದರಿಯಾಗಿದ್ದಾರೆ.

ಸುಮಾರು 11.50 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ಥಿನ ನ್ಯಾಯಾಲಯಗಳ ಸಂಕೀರ್ಣ ನಿರ್ಮಿಸಲಾಗಿದ್ದು, ಇಂದು ಲೋಕಾರ್ಪಣೆಗೊಳಿಸಲಾಯಿತು.

Comments

Leave a Reply

Your email address will not be published. Required fields are marked *