ತನ್ನ 30 ವರ್ಷದ ಆಪ್ತ ರಾಕೇಶ್ ಮಲ್ಲಿ ಹತ್ಯೆಗೆ ಸುಪಾರಿ ಕೊಟ್ಟ ಮುತ್ತಪ್ಪ ರೈ?

– ಮತ್ತೆ ಫೀಲ್ಡ್ ಗೆ ಇಳಿದ್ರಾ ರೈ

ಮಂಗಳೂರು: ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಮತ್ತೆ ಫೀಲ್ಡ್ ಗೆ ಇಳಿದ್ರಾ ಅನ್ನುವ ಸಂಶಯ ಹುಟ್ಟಲಾರಂಭಿಸಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೈ ವಿರುದ್ಧ 30 ವರ್ಷಗಳ ಒಡನಾಟವಿದ್ದ ಆಪ್ತ ಮಂಗಳೂರು ಮೂಲದ ರಾಕೇಶ್ ಮಲ್ಲಿ ತನಗೆ ಜೀವ ಬೆದರಿಕೆ ಇದೆ ಎಂದು ಬೆಂಗಳೂರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ರಾಕೇಶ್ ಮಲ್ಲಿ, ಬಂಟ್ವಾಳದಲ್ಲಿ ನಾಲ್ಕೂವರೆ ವರ್ಷಗಳ ಹಿಂದೆ ಮುತ್ತಪ್ಪ ರೈ ಜೊತೆಗೂಡಿ ಹದಿನೇಳುವರೆ ಎಕರೆ ಜಾಗಕೊಂಡಿದ್ದೇವೆ. ಈಗ ಹಣ ಅಥವಾ ಜಾಗ ಕೇಳಿದರೆ ರೈ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯಯುತವಾದ ಹಣ ಕೇಳಿದ್ರೆ ರೈಗೆ ಪುತ್ತೂರು ಕೋರ್ಟ್ ಆವರಣದಲ್ಲಿ ಗುಂಡು ಹೊಡೆದವರಿಂದಲೇ ನನ್ನನ್ನು ಕೊಲೆ ಮಾಡಲು ಸುಪಾರಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಘಟನೆ ಕಟ್ಟಿ ತನ್ನ ಹಿಂದಿನ ತಪ್ಪುಗಳಿಗೆ ಬೇಲಿ ಹಾಕಿದ್ದ ರೈ ಮಾತಿನಿಂದಲೇ ಎಲ್ಲರನ್ನು ಓಲೈಸುತ್ತಿದ್ದಾರೆ. ಮುತ್ತಪ್ಪ ರೈ ತುಂಬಾ ಮಂದಿಗೆ ಹಣ ಕೊಡೋದಕ್ಕೆ ಬಾಕಿ ಇದೆ. ಹಣ ಕೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈಗೆ 3 ಕೋಟಿ ರೂ. ಕೊಡುತ್ತೇನೆ ರಾಕೇಶ್ ಮಲ್ಲಿಯನ್ನು ಹತ್ಯೆ ಮಾಡಬೇಕೆಂದು ಸುಪಾರಿ ನೀಡಿದ್ದರು ಎಂದು ಮಲ್ಲಿ ಆರೋಪ ಮಾಡಿದ್ದಾರೆ.

ಹಣದ ಮೇಲೆ ಅತಿಯಾಸೆ ಹೊಂದಿರುವ ರೈ ಇಲ್ಲಿಯವರೆಗೆ ಒಂದು ರೂಪಾಯಿ ಹಣವನ್ನು ಯಾರಿಗೂ ನೀಡಿಲ್ಲ. ಯಾರಿಗೂ ಸೈಟ್ ನೀಡಿಲ್ಲ ಎಂದು ರಾಕೇಶ್ ಮಲ್ಲಿ ತಿಳಿಸಿದ್ದಾರೆ. ಮುತ್ತಪ್ಪ ರೈ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮಾಡಿ ಕಾನೂನು ಮೂಲಕ ಶಿಕ್ಷೆ ನೀಡಬೇಕೆಂದು ರಾಕೇಶ್ ಮಲ್ಲಿ ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *