ಮೈಸೂರಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಆರತಕ್ಷತೆ

ಮೈಸೂರು: ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ಆರಂಭವಾದ ‘ಪ್ರೀತಿ’ಯ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಹೌದು, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರ ಮದುವೆ ನಾಳೆ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ನಡೆಯಲಿದ್ದು, ಇಂದು ಆರತಕ್ಷತೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದಾರೆ.

ಇಂದು ಬೆಳಗ್ಗಿನಿಂದಲೇ ವಧು-ವರರ ಮನೆಯಲ್ಲಿ ಸಂಪ್ರದಾಯದ ಪ್ರಕಾರ ಹಲವಾರು ಶಾಸ್ತ್ರಗಳನ್ನು ಮುಗಿಸಿ ಜೋಡಿ ಇದೀಗ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ಗೆ ತೆರಳಿದ್ದು, ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಬೇಬಿ ಡಾಲ್ ಮೆರೂನ್ ಕಲರ್ ಗೌನ್‍ನಲ್ಲಿ ಮಿಂಚಿದರೆ, ಚಂದನ್ ಕೂಡ ಅದೇ ಕಲರ್ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ.  ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್, ಅಕುಲ್ ಬಾಲಾಜಿ, ಧ್ರುವ ಸರ್ಜಾ ದಂಪತಿ ಹಾಗೂ ಮತ್ತಿತರ ಗಣ್ಯರು ಭಾಗಿಯಾಗಿದ್ದರು.

ನಿವೇದಿತಾ ಗೌಡ ಹಾಗೂ ಚಂದನ್‍ಶೆಟ್ಟಿ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆಯಲಿದೆ. ನಾಳೆ (ಫೆ.26) ಬೆಳಿಗ್ಗೆ 8.15ರಿಂದ 9 ಗಂಟೆಗೆ ಧಾರಾ ಮುಹೂರ್ತವಿದ್ದು, ಮೀನ ಲಗ್ನದಲ್ಲಿ ನಿವೇದಿತಾಳನ್ನು ಚಂದನ್ ಶೆಟ್ಟಿ ವರಿಸಲಿದ್ದಾರೆ. ವಿವಾಹ ಸಮಾರಂಭಕ್ಕೆ ಸ್ಯಾಂಡಲ್ ವುಡ್ ಗಣ್ಯರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಸಾಕ್ಷಿ ಆಗುವ ಸಾಧ್ಯತೆ ಇದೆ.

ಕಳೆದ ವರ್ಷದ ‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿತ್ತು. ಬಳಿಕ ಸ್ವತಃ ಚಂದನ್ ಅವರೇ ಕ್ಷಮೆ ಕೇಳಿದ್ದರು. ಕಳೆದ ವರ್ಷ ಅಕ್ಟೋಬರ್ 21ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.

Comments

Leave a Reply

Your email address will not be published. Required fields are marked *