ಪ್ರೀತ್ಸಿ ಮದ್ವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾದ ಘಟನೆ ಆನೇಕಲ್ ತಾಲೂಕಿನ ಹಿಲಲಿಗೆ ರೈಲ್ವೆ ಸ್ಟೇಷನ್ ಬಳಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಚಿತ್ರದುರ್ಗ ಮೂಲದ ಅರುಣಾಕ್ಷಿ ಶವವಾಗಿ ಪತ್ತೆಯಾದ ನವವಿವಾಹಿತೆ. ಅರುಣಾಕ್ಷಿ ಏಳು ತಿಂಗಳ ಹಿಂದೆಯಷ್ಟೇ ಆನೇಕಲ್‍ನ ರಾಚಮಾನಹಳ್ಳಿ ನಿವಾಸಿ ಶಿವಕುಮಾರ್ ಜೊತೆಗೆ ಮದುವೆ ಆಗಿತ್ತು. ಸೋಮವಾರ ರಾತ್ರಿಯೇ ಅರುಣಾಕ್ಷಿ ಕೊಲೆಯಾಗಿದ್ದಾಳೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅರುಣಾಕ್ಷಿ ಕೆಲವು ವರ್ಷಗಳ ಹಿಂದೆ ಓದಿಗಾಗಿ ಕುಟುಂಬದ ಜೊತೆಗೆ ಬಂದಿದ್ದಳು. ಆದರೆ ತನ್ನ ಕಾಲೇಜು ಬಳಿಯೇ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತನ ಪ್ರೇಮ ಪಾಶದಲ್ಲಿ ಬಿದ್ದಿದ್ದಳು. ಇಬ್ಬರೂ ಬೆಂಗಳೂರಿನ ಬೀದಿ ಬೀದಿ ಸುತ್ತಾಡಿದ್ದರು. ಸುಮಾರು 8 ತಿಂಗಳ ಹಿಂದೆ ಮನೆಯ ವಿರೋಧದ ನಡುವೆಯೂ ಅರುಣಾಕ್ಷಿ ಹಾಗೂ ಶಿವಕುಮಾರ್ ಮದುವೆಯಾಗಿದ್ದರು.

ಕಳೆದು ಒಂದು ತಿಂಗಳ ಹಿಂದೆ ರಾಚಮಾನಹಳ್ಳಿಗೆ ಬಂದು ವಾಸವಾಗಿದ್ದ ಶಿವಕುಮಾರ್ ದಂಪತಿ ಸೋಮವಾರ ರಾತ್ರಿ ಸಣ್ಣ ವಿಚಾರಕ್ಕೆ ಫೋನ್‍ನಲ್ಲಿಯೇ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಮುನಿಸಿಕೊಂಡ ಅರುಣಾಕ್ಷಿ ತಾನು ತವರು ಮನೆಗೆ ಹೋಗುತ್ತೇನೆ ಅಂತ ಪತಿಗೆ ಹೇಳಿ, ತನ್ನ ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ಆನೇಕಲ್ ತಾಲೂಕಿನ ಹಿಲಲಿಗೆ ರೈಲ್ವೆ ಸ್ಟೇಷನ್‍ಗೆ ಬಂದಿದ್ದಳು. ಆದರೆ ಇಂದು ಬೆಳಗ್ಗೆ ಆಕೆಯ ಮೃತ ದೇಹ ರೈಲ್ವೆ ಹಳಿಯ ಬಳಿ ಪತ್ತೆಯಾಗಿದೆ.

ಶಿವಕುಮಾರ್ ಪತ್ನಿಗಾಗಿ ಭಾನುವಾರ ರಾತ್ರಿ ಹಾಗೂ ಸೋಮ ಬೆಂಗಳೂರಿನ ಹಲವು ಕಡೆ ಹುಡುಕಾಡಿದ್ದ. ಆದರೆ ಸಿಗದೆ ಮನೆಗೆ ವಾಪಸ್ ಬಂದಿದ್ದ. ರೈಲ್ವೆ ಹಳಿಯ ಮೇಲೆ ಅರುಣಾಕ್ಷಿ ಮೃತದೇಹ ಬೆಳಗ್ಗೆ ಪತ್ತೆಯಾಗಿದೆ. ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿ ಶವವನ್ನು ರೈಲ್ವೆ ಹಳಿ ಮೇಲೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *