ಬಿಟ್ಟು ಹೋದ ಪ್ರಿಯಕರನಿಗಾಗಿ ನಂದಿಬೆಟ್ಟದ ಬಳಿ 2-3 ತಿಂಗಳಿಂದ ಕಾಯ್ತಿರೋ ಯುವತಿ

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟದ ಅಂಚಿನಲ್ಲೇ ಇರುವ ಕಾರಹಳ್ಳಿ ಗ್ರಾಮದಲ್ಲಿ ಕಳೆದ 2-3 ತಿಂಗಳುಗಳಿಂದ ಅಪರಿಚಿತ ಯುವತಿಯೊಬ್ಬಳು ಮಾನಸಿಕ ಅಸ್ವಸ್ಥೆಯ ರೀತಿ ವರ್ತನೆ ಮಾಡುತ್ತಾ ನಂದಿಬೆಟ್ಟದ ರಸ್ತೆಯಲ್ಲಿ ಅಲೆದಾಡುತ್ತಿದ್ದಳು.

ಗ್ರಾಮದ ಬಸ್ ನಿಲ್ದಾಣ, ಬೇಕರಿ, ಸೇರಿದಂತೆ ನಂದಿಬೆಟ್ಟದ ಕಡೆಯ ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುವುದು ಮರಳಿ ವಾಪಸ್ ಬಂದು ರಾತ್ರಿ ಬ್ಯಾಂಕಿನ ಸಿಸಿಟಿವಿ ಕೆಳಭಾಗದಲ್ಲಿ ಮಲಗುತ್ತಿದ್ದಳು. ಮತ್ತೆ ಬೆಳಾಗಾದರೆ ಇದೇ ಕಾಯಕ ಮಾಡುತ್ತಿದ್ದಳು. ಯಾರೋ ಮಾನಸಿಕ ಅಸ್ವಸ್ಥೆ ಹುಚ್ಚಿ ಎಂದು ಗ್ರಾಮಸ್ಥರು ಸುಮ್ಮನಾಗಿದ್ದರು. ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ, ಯಾರಾದರೂ ತಿನ್ನಲೂ ಏನಾದರೂ ಕೊಟ್ಟರೂ ತಿನ್ನುತ್ತಿರಲಿಲ್ಲ.

ಹೀಗಾಗಿ 2-3 ತಿಂಗಳು ಗಳಿಂದ ಯುವತಿಯ ಇದೇ ರೀತಿಯ ವರ್ತನೆ ಕಂಡು ಗ್ರಾಮಸ್ಥರು ಯುವತಿಯ ಏನಾದರೂ ಅನಾಹುತ ಆಗಬಹುದು ಅಂತ ಯುವತಿಯನ್ನ ವಿಚಾರಿಸಲು ಮುಂದಾಗಿದ್ದಾರೆ. ಆದರೆ ಆಕೆಗೆ ಕನ್ನಡ ಭಾಷೆ ಅರ್ಥ ಆಗುತ್ತಿರಲಿಲ್ಲ. ಗ್ರಾಮಸ್ಥರಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಹಿಂದಿ ಮಾತನಾಡುತ್ತಿದ್ದ ಹಸಿನಾ ಎಂಬಾಕೆಯನ್ನ ಕರೆಸಿದ್ದು, ಆಗ ಆಸಲಿ ವಿಷಯ ಗೊತ್ತಾಗಿದೆ.

ಅರ್ಧದಾರಿಯಲ್ಲೇ ಬಿಟ್ಟು ಹೋದ ಪ್ರಿಯಕರ
ಕಾರಹಳ್ಳಿ ಗ್ರಾಮಕ್ಕೆ ತನ್ನ ಪ್ರಿಯಕರ ಜೊತೆ ಬಂದಿದ್ದ ಈ ಯುವತಿ, ಹಸೀನಾ ಮನೆ ಪಕ್ಕದಲ್ಲೇ ವಾಸವಾಗಿದ್ದರಂತೆ. ಪದೇ ಪದೇ ಸಣ್ಣ ಸಣ್ಣ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ ಒಂದು ದಿನ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋದ ಪ್ರಿಯಕರ ಅಜಯ್ ತನ್ನನ್ನ ಅರ್ಧದಾರಿಯಲ್ಲೇ ಬಿಟ್ಟು ಹೋಗಿದ್ದಾನೆ ಅಂತ ಈ ಯುವತಿ ಹೇಳುತ್ತಿದ್ದಾಳೆ.

ಯುವತಿ ಹೇಳಿರುವ ಪ್ರಕಾರ ತಾನು ಕೋಲ್ಕತ್ತಾ ಮೂಲದವಳಾಗಿದ್ದು ತನ್ನನ್ನ ಪ್ರೀತಿಸಿದ ಅಜಯ್ ಎಂಬಾತ ಇಲ್ಲಿಗೆ ಕರೆದುಕೊಂಡು ಬಂದಿದ್ದ. ಆದರೆ ಊರಿಗೆ ವಾಪಸ್ ಹೋಗೋಣ ಎಂದು ಕರೆದುಕೊಂಡು ಹೋದವ ನನ್ನನ್ನ ಬಿಟ್ಟು ಹೋಗಿದ್ದಾನೆ. ಹೀಗಾಗಿ ಮರಳಿ ಅಜಯ್ ತನಗಾಗಿ ಇದೇ ಗ್ರಾಮಕ್ಕೆ ಬರುತ್ತಾನೆ ಎಂದು ತಾನು ಕಾಯುತ್ತಿರುವುದಾಗಿ ಹಿಂದಿ ಭಾಷೆಯಲ್ಲಿ ಹೇಳಿದ್ದಾಳೆ. ಯುವತಿಯ ಕಷ್ಟಕ್ಕೆ ಮನಸೋತ ಗ್ರಾಮಸ್ಥರು ಆಕೆಯನ್ನ ಸದ್ಯ ಮಹಿಳಾ ಸ್ವಾಂತಾನ ಕೇಂದ್ರಕ್ಕೆ ಕಳುಹಿಸಿದ್ದು, ಅಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಸದ್ಯ ಮಾನಸಿಕವಾಗಿ ಜರ್ಜರಿತಳಾಗಿರುವ ಯುವತಿ ಸರಿಯಾಗಿ ಪ್ರತಿಕ್ರಿಯೆ ಕೊಡುತ್ತಿಲ್ಲ.

Comments

Leave a Reply

Your email address will not be published. Required fields are marked *