ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2,233ಕ್ಕೆ ಏರಿಕೆ – ಭಾರತೀಯರನ್ನು ವಾಪಸ್ ಕರೆತರಲು ನಿರ್ಧಾರ

ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್‍ಗೆ ಚೀನಾ ಅಕ್ಷರಶಃ ನಲುಗಿ ಹೋಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 2,233ಕ್ಕೆ ಏರಿದೆ. ಇತ್ತ ಭಾರತೀಯ ವಿದೇಶಾಂಗ ಸಚಿವಾಲಯವು ವುಹಾನ್‍ನಲ್ಲಿ ಇರುವ ಭಾರತೀಯರನ್ನು ಭಾರತೀಯ ವಾಯು ಸೇನೆಯ ಸಹಾಯದಿಂದ ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗುತ್ತೆ ಎಂದು ತಿಳಿಸಿದೆ.

ಹೌದು. ಸದ್ಯ ಚೀನಾ ಮಾತ್ರವಲ್ಲಿದೆ 25ಕ್ಕೂ ಹೆಚ್ಚು ದೇಶಗಳಿಗೆ ಹೆಮ್ಮಾರಿ ಕೊರೊನಾ ಕಾಲಿಟ್ಟಿದೆ. ಚೀನಾದಲ್ಲಿ ಈವರೆಗೆ ಸುಮಾರು 75 ಸಾವಿರಕ್ಕೂ ಅಧಿಕ ಮಂದಿ ಕೊರೆನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇತ್ತ ಹುಬೈನಲ್ಲಿ ಸೋಂಕು ತಗುಲಿರುವ 411 ಹೊಸ ಪ್ರಕರಣಗಳು ವರದಿಯಾಗಿದ್ದರೆ, ವುಹಾನ್‍ನಲ್ಲಿ 319 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಗುರುವಾರ ಮಾತನಾಡಿ, ಚೀನಾದಲ್ಲಿ ವಿಮಾನಗಳ ಪ್ರಯಾಣಕ್ಕೆ ನಿಷೇಧ ಹೇರಲಾಗಿಲ್ಲ. ಆದರೆ, ಪ್ರಯಾಣದ ವೇಳೆ ನಿಯಮಗಳ ಪಾಲನೆಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ಚೀನಾದ ವುಹಾನ್ ನಗರದಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ಈಗಾಗಲೇ ವೈದ್ಯಕೀಯ ಸಾಮಾಗ್ರಿಗಳನ್ನು ತಲುಪಿಸಲಾಗಿದ್ದು, ಮತ್ತೆ 100 ಭಾರತೀಯರನ್ನು ವುಹಾನ್‍ನಿಂದ ಶೀಘ್ರದಲ್ಲಿಯೇ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಿದರು.

ಈಗಾಗಲೇ ಭಾರತ ಸಿ-17 ಸೇನಾ ವಿಮಾನವನ್ನು ವುಹಾನ್‍ಗೆ ಕಳುಹಿಸಿದ್ದು, ಸಂಕಷ್ಟದಲ್ಲಿರುವ ಭಾರತೀಯನ್ನು ಭಾರತಕ್ಕೆ ಕರೆ ತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹಾಗೆಯೇ ಭಾರತೀಯ ಪ್ರಜೆಗಳ ಮೇಲೆ ನಿಗಾ ಇರಿಸಲಾಗಿದೆ. ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತ ವುಹಾನ್ ಹಾಗೂ ಹುಬೆ ಪ್ರಾಂತ್ಯದಲ್ಲಿರುವ ಭಾರತೀಯರಿಗೆ ಈಗಾಗಲೇ ಸಲಹೆ ನೀಡಲಾಗಿದೆ. ಕಳೆದೊಂದು ತಿಂಗಳಿನಿಂದ 640 ಭಾರತೀಯರನ್ನು ವುಹಾನ್‍ನಿಂದ ಸ್ಥಳಾಂತರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *