ದಳಪತಿಗಳ ಕೋಟೆಯಲ್ಲಿ ಮಹಿಳೆಯರಿಗೆ ಇನ್ಮುಂದೆ ಪ್ರಬಲ ಆದ್ಯತೆ

ಬೆಂಗಳೂರು : ಲೋಕಸಭೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಿಂದ ಕಂಗೆಟ್ಟಿರೋ ಜೆಡಿಎಸ್ ಈಗ ಮಹಿಳಾ ಮತದಾರರ ಮೇಲೆ ಕಣ್ಣಿಟ್ಟಿದೆ. ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆಯಾದ್ರು ಆದ್ಯತೆ ಮಾತ್ರ ಪುರುಷರಿಗೆ ನೀಡಲಾಗ್ತಿದೆ. ಇದರಿಂದ ಮಹಿಳಾ ಮತಗಳು ಜೆಡಿಎಸ್ ಗೆ ಬರುತ್ತಿಲ್ಲ ಅನ್ನೋದು ಪಕ್ಷದ ಲೆಕ್ಕಾಚಾರ. ಹೀಗಾಗಿ ಮಹಿಳೆಯರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಿ ಮುಂಬರುವ ಚುನಾವಣೆ ಎದುರಿಸೋಕೆ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.

ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ 33% ಮಹಿಳಾ ಮೀಸಲಾತಿಗಾಗಿ ಬಿಲ್ ಜಾರಿಗೆ ತಂದಿದ್ದರು. ರಾಜ್ಯಸಭೆಯಲ್ಲಿ ಕಾಯ್ದೆ ಆಂಗೀಕಾರವೂ ಆಗಿದೆ. ಲೋಕಸಭೆಯಲ್ಲಿ ಮಾತ್ರ ಕಾಯ್ದೆ ಅಂಗೀಕಾರ ಆಗಬೇಕು. ಇದಕ್ಕಾಗಿ ಹೋರಾಟ ಮಾಡಲು ಜೆಡಿಎಸ್ ನಿರ್ಧಾರ ಮಾಡಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ 33% ಮೀಸಲಾತಿ ನೀಡಬೇಕು ಅಂತ ನಿರ್ಣಯ ಅಂಗೀಕಾರ ಮಾಡಿದೆ. ಮಹಿಳೆಯರಿಗೂ ರಾಜಕೀಯ ಮೀಸಲಾತಿ ಕೊಡಬೇಕು ಅನ್ನೋದು ಜೆಡಿಎಸ್ ವಾದ. ಹೀಗಾಗಿ ದೆಹಲಿ ಮಟ್ಟದಲ್ಲಿ ಹೋರಾಟಕ್ಕೂ ಚಿಂತನೆ ನಡೆಸಿದೆ.

ಹೋರಾಟ ಒಂದು ಕಡೆಯಾದ್ರೆ ಅವಕಾಶಗಳ ಬಗ್ಗೆ ಜೆಡಿಎಸ್ ನಲ್ಲಿ ಚಿಂತನೆ ನಡೆದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 33% ಮಹಿಳೆಯರಿಗೆ ಟಿಕೆಟ್ ನೀಡುವ ಕುರಿತು ದೇವೇಗೌಡರು ಆಸಕ್ತಿ ತೋರಿಸಿದ್ದಾರೆ. ಅಲ್ಲದೆ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲೂ ಹೆಚ್ಚಿನ ಸ್ಥಾನ ಮಹಿಳೆಯರಿಗೆ ಕೊಡಲು ಚಿಂತನೆ ಮಾಡಿದ್ದಾರೆ. ಯಾರೇ ಪಕ್ಷ ಸಂಘಟನೆ ಮಾಡಿದ್ರು ಟಿಕೆಟ್ ಕೊಡ್ತೀವಿ. ಮಹಿಳೆಯರೇ ಸ್ಪರ್ಧೆ ಮಾಡಬಹುದು ಅನ್ನೋ ಸಂದೇಶ ರವಾನೆ ಮಾಡಿದ್ದಾರೆ. ಇದೆಲ್ಲದರ ಮಧ್ಯೆ ಮುಂದಿನ ತಿಂಗಳು ಅರಮನೆ ಮೈದಾನದಲ್ಲಿ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಅಂದಿನ ಸಮಾವೇಶದಂದು ಮಹಿಳೆಯರಿಗೆ ಟಿಕೆಟ್ ನೀಡುವ ಘೋಷಣೆ ಮಾಡೋ ಸಾಧ್ಯತೆ ಇದೆ. ದೇವೇಗೌಡರ ಈ ಮಹಿಳಾ ಮೀಸಲಾತಿ ಅಸ್ತ್ರ ಮುಂದಿನ ಚುನಾವಣೆಯಲ್ಲಿ ಯಶಸ್ವಿ ಆಗುತ್ತಾ ಕಾದು ನೋಡಬೇಕು.

Comments

Leave a Reply

Your email address will not be published. Required fields are marked *