ಅಭಿಮಾನಿಯ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ನೀಡಿದ ನಟ ರಾಮ್ ಚರಣ್

ಹೈದರಾಬಾದ್: ಟಾಲಿವುಡ್ ನಟ ರಾಮ್ ಚರಣ್ ಅವರು ಡಿಸೆಂಬರ್ ನಲ್ಲಿ ನಿಧನರಾದ ತಮ್ಮ ಹಿರಿಯ ಅಭಿಮಾನಿಯ ಕುಟುಂಬಕ್ಕೆ 10 ಲಕ್ಷ ರೂ. ಚೆಕ್ ನೀಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 8ರಂದು ‘ಗ್ರೇಟರ್ ಹೈದರಾಬಾದ್ ಮೆಗಾ ಫ್ಯಾನ್ಸ್ ಅಸೋಸಿಯೇಷನ್’ ಅಧ್ಯಕ್ಷರಾಗಿದ್ದ ನೂರ್ ಅಹಮ್ಮದ್ ನಿಧನರಾಗಿದ್ದರು. ನೂರ್ ಅಹಮ್ಮದ್ ಅವರು ಚಿರಂಜೀವಿ, ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಹಲವು ವರ್ಷಗಳಿಂದ ಮೆಗಾ ಸ್ಟಾರ್ ಕುಟುಂಬವನ್ನು ಬೆಂಬಲಿಸಿದ್ದರು. ಇದನ್ನೂ ಓದಿ: ನಿಧನರಾದ ಅಭಿಮಾನಿ ಕುಟುಂಬಕ್ಕೆ ಅಲ್ಲು ಅರ್ಜುನ್ ಆರ್ಥಿಕ ನೆರವು 

ನೂರ್ ಅಹಮ್ಮದ್ ನಿಧನರಾಗಿದ್ದ ವಿಷಯ ತಿಳಿದು ಚಿರಂಜೀವಿ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದರು. ಈ ವೇಳೆ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಆರ್ಥಿಕ ಸಹಾಯ ಮಾಡುವುದ್ದಾಗಿ ಹೇಳಿದ್ದರು. ಅಭಿಮಾನಿಯ ಕುಟುಂಬಸ್ಥರಿಗೆ ಕೊಟ್ಟ ಮಾತನ್ನು ರಾಮ್ ಚರಣ್ ಅವರು 10 ಲಕ್ಷ ರೂ. ಚೆಕ್ ನೀಡುವ ಮೂಲಕ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಮುಂದೆಯೂ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ರಾಮ್ ಚರಣ್ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.

ರಾಮ್ ಚರಣ್ ಅವರು ನೂರ್ ಅಹಮ್ಮದ್ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ವರ್ಷ ಡಿಸೆಂಬರ್ 10ರಂದು ರಾಮ್ ಚರಣ್ ಅವರಿಗೆ ಚೆನ್ನೈನಲ್ಲಿ ‘ದಿ ಪೀಪಲ್ ಎಂಟರ್‍ಟೈನರ್ ಪರ್ ಎಕ್ಸಲೆನ್ಸ್ ಅವಾರ್ಡ್’ ನೀಡಲಾಗಿತ್ತು. ಈ ವೇಳೆ ರಾಮ್ ಚರಣ್ ತಮ್ಮ ಅವಾರ್ಡ್ ಅನ್ನು ನೂರ್ ಅಹಮ್ಮದ್ ಅವರಿಗೆ ಡೆಡಿಕೇಟ್ ಮಾಡಿದ್ದರು. ವೇದಿಕೆ ಮೇಲೆ ಅವರನ್ನು ನೆನಸಿಕೊಂಡು ಭಾವುಕರಾಗಿದ್ದರು.

ಸದ್ಯ ರಾಮ್ ಚರಣ್ ಅವರು ನಿರ್ದೇಶಕ ಎಸ್‍ಎಸ್ ರಾಜಮೌಳಿ ನಿರ್ದೇಶಿಸುತ್ತಿರುವ ‘ಆರ್‌ಆರ್‌ಆರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ಅಜಯ್ ದೇವಗನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *