ಕಾರಿಗೆ ಎತ್ತಿನಗಾಡಿ ಡಿಕ್ಕಿ – ಪಲ್ಟಿ ಹೊಡೆದ ರಾಸುಗಳು

ಚಿಕ್ಕಮಗಳೂರು: ಜಾತ್ರೆ ಮುಗಿಸಿಕೊಂಡು ಊರಿಗೆ ಹಿಂದಿರುಗುವ ವೇಳೆ ವೇಗವಾಗಿದ್ದ ಎತ್ತಿನಗಾಡಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಕಾರಿನ ಮೇಲಿಂದ ಹಾರಿ ಪಲ್ಟಿಯಾಗಿ ಬಿದ್ದಿವೆ.

ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಈ ಅವಘಡ ನಡೆದಿದ್ದು, ಭಾರೀ ಅನಾಹುತ ಕೂದಲೆಳೆ ಅಂತರದಲ್ಲಿ ಪಾರಾದಂತಾಗಿದೆ. ಚಿಕ್ಕಮಗಳೂರು-ಚಿತ್ರದುರ್ಗ ಗಡಿ ಭಾಗದ ಸುಪ್ರಸಿದ್ಧ ಅಂತಘಟ್ಟೆ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು, ಎರಡು ಜೋಡೆತ್ತುಗಳು ಗಂಭೀರವಾಗಿ ಗಾಯಗೊಂಡಿವೆ.

ಜಾತ್ರೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಸ್ಪರ್ಧೆಗೆ ಬಿದ್ದ ಎರಡು ಎತ್ತಿನಗಾಡಿ ಚಾಲಕರು ವೇಗವಾಗಿದ್ದ ಎತ್ತಿನ ಬಾಲವನ್ನು ತಿರುವಿ ಎತ್ತುಗಳನ್ನು ಬೆದರಿಸಿದರು. ಪರಿಣಾಮ ವೇಗದಲ್ಲಿದ್ದ ಎತ್ತುಗಳು ಗಾಬರಿಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿವೆ.

ಈ ವೇಳೆ ನೊಗದ ಹಗ್ಗಕ್ಕೆ ಸಿಲುಕಿ ಪಲ್ಟಿ ಹೊಡೆದಿದ್ದ ಎತ್ತುಗಳನ್ನು ಕುಣಿಕೆಯಿಂದ ಬಿಡಿಸಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಕಾರಿನ ಮುಂಭಾಗದ ಗಾಜು ಸಂಪೂರ್ಣ ಪುಡಿಪುಡಿಯಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಜಾತ್ರೆಗೆ ಸಾವಿರಾರು ಜೋಡೆತ್ತಿನ ಗಾಡಿಗಳಲ್ಲಿ ಭಕ್ತರು ಆಗಮಿಸಿದ್ದರು. ಈ ಜಾತ್ರೆಗೆ ಎಷ್ಟೇ ಶ್ರೀಮಂತರಾಗಿದ್ರು ಕೆಲವರು ಗಾಡಿಯಲ್ಲೇ ಬಂದು ಇಲ್ಲೇ ವಾಸ್ತವ್ಯ ಹೂಡಿ ಜಾತ್ರೆಯಲ್ಲಿ ಪಾಲ್ಗೊಳ್ತಾರೆ. ಜಾತ್ರೆ ಮುಗಿಸಿ ಹಿಂದಿರುಗುವಾಗ ನಡೆದ ಅಪಘಾತಕ್ಕೆ ಜನ ಆತಂಕಕ್ಕೀಡಾಗಿದ್ದಾರೆ.

Comments

Leave a Reply

Your email address will not be published. Required fields are marked *