ಸಿದ್ದರಾಮಯ್ಯ ಲ್ಯಾಪ್‍ಟಾಪ್ ಯೋಜನೆಗೆ ಬಿಎಸ್‍ವೈ ಕೊಕ್ಕೆ

ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಲ್ಯಾಪ್‍ಟಾಪ್ ಯೋಜನೆಗೆ ಸಿಎಂ ಯಡಿಯೂರಪ್ಪ ಕೊಕ್ಕೆ ಹಾಕೋ ಲಕ್ಷಣಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ ಹಿಂದಿನ ಸರ್ಕಾರಗಳ ಕೆಲ ಯೋಜನೆಗಳ ಅನುದಾನ ಕಡಿತ ಮಾಡೋ ಚಿಂತನೆಯಲ್ಲಿದೆ ಅಂತ ಹೇಳಲಾಗ್ತಿದೆ. ಇದರ ಭಾಗವಾಗಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಲ್ಯಾಪ್‍ಟಾಪ್ ಯೋಜನೆಗೂ ಮುಂದಿನ ಬಜೆಟ್ ನಲ್ಲಿ ಅನುದಾನ ಕಡಿತ ಮಾಡುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವಧಿಯಲ್ಲಿ ಸುಮಾರು 280 ಕೋಟಿ ವೆಚ್ಚದಲ್ಲಿ ಲ್ಯಾಪ್‍ಟಾಪ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಬಿಕಾಂ, ಬಿಎಸ್‍ಸಿ ಪದವಿಯ ಅಂತಿಮ ವರ್ಷದ ಸುಮಾರು 1 ಲಕ್ಷ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಿತ್ತು. ಈಗಾಗಲೇ ಸಿದ್ದರಾಮಯ್ಯ ಅವಧಿಯ ಲ್ಯಾಪ್‍ಟಾಪ್‍ಗಳನ್ನ ವಿದ್ಯಾರ್ಥಿಗಳಿಗೆ ಸರ್ಕಾರ ನೀಡಿದೆ. ಆದರೆ ಮುಂಬರುವ ಅಂದರೆ 2020-21ನೇ ಸಾಲಿನ ಬಜೆಟ್ ವೇಳೆ ಮತ್ತೆ ಲ್ಯಾಪ್‍ಟಾಪ್ ಯೋಜನೆಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಹೀಗಾಗಿ ಯೋಜನೆಗೆ ಹಣ ಸಿಗೋದು ಡೌಟ್ ಎನ್ನಲಾಗುತ್ತಿದೆ.

ಬಿಕಾಂ ಮತ್ತು ಬಿಎಸ್‍ಸಿ ಪದವಿ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಲ್ಯಾಪ್‍ಟಾಪ್ ಕೊಡುವುದರಿಂದ ಅರ್ಥಿಕವಾಗಿ ಹೆಚ್ಚು ಹೊರೆ ಬೀಳುತ್ತೆ ಅನ್ನೋದು ಸರ್ಕಾರದ ಲೆಕ್ಕಾಚಾರ. ಹೀಗಾಗಿ ಪದವಿ ವಿದ್ಯಾರ್ಥಿಗಳಿಗೆ ಬದಲಾಗಿ, ಡಿಪ್ಲೋಮಾ, ಕಾನೂನು ವಿದ್ಯಾರ್ಥಿಗಳು ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲು ನಿರ್ಧಾರ ಸರ್ಕಾರ ಮಾಡಿದೆಯಂತೆ. ಎಂಜಿನಿಯರ್, ಕಾನೂನು, ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ. ಆರ್ಥಿಕವಾಗಿಯೂ ಇದನ್ನ ಸರಿದೂಗಿಸಬಹುದು. ಲ್ಯಾಪ್‍ಟಾಪ್ ಕೊಟ್ಟಂತೆಯೂ ಆಗುತ್ತೆ ಅನ್ನೋದು ಬಿಜೆಪಿ ಸರ್ಕಾರದ ಲೆಕ್ಕಾಚಾರ. ಬಿಜೆಪಿ ಸರ್ಕಾರದ ಈ ಲೆಕ್ಕಾಚಾರಕ್ಕೆ ಬಿಕಾಂ ಮತ್ತು ಬಿಎಸ್‍ಸಿ ಪದವಿ ವಿದ್ಯಾರ್ಥಿಗಳು ಮುಂದಿನ ವರ್ಷದಿಂದ ಲ್ಯಾಪ್‍ಟಾಪ್ ಮಿಸ್ ಮಾಡಿಕೊಳ್ಳೋ ಲಕ್ಷಣ ಕಾಣ್ತಿದೆ.

Comments

Leave a Reply

Your email address will not be published. Required fields are marked *