ಸರ್ಕಾರಿ ನೌಕರರೇ ಹುಷಾರ್ – ಕೆಲಸದ ವೇಳೆ ಕಾಲಹರಣ ಮಾಡಿದ್ರೆ ಶಿಸ್ತು ಕ್ರಮ

ಬೆಂಗಳೂರು: ನೀವು ಸರ್ಕಾರಿ ಅಧಿಕಾರಿ ಅಥವಾ ನೌಕರರಾ? ಕರ್ತವ್ಯದ ಸಮಯದಲ್ಲಿ ಟೀ, ಕಾಫಿ ಬ್ರೇಕ್ ನೆಪದಲ್ಲಿ ಹೊರಹೋಗಿ ಕಾಲ ಹರಣ ಮಾಡ್ತಿದ್ದೀರಾ?. ಹಾಗಿದ್ರೆ ಜೋಕೆ, ಇನ್ಮುಂದೆ ನೀವು ಹೀಗೆಲ್ಲ ಮಾಡಿದ್ರೆ ಸರ್ಕಾರಿ ಕೆಲಸಕ್ಕೆ ತೊಂದರೆಯಾಗಬಹುದು.

ತುಂಬಾ ಜನ ಸರ್ಕಾರಿ ಅಧಿಕಾರಿಗಳು, ನೌಕರರಿಂದ ಅನಗತ್ಯ ಕಾಲಹರಣ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಟೀ, ಕಾಫಿ ಬ್ರೇಕ್ ಅಂತ ಹೇಳಿಕೊಂಡು ಕೆಲಸದ ವೇಳೆಯಲ್ಲಿ ಹೊರಗಡೆ ಹೋಗಿ ಅನಗತ್ಯವಾಗಿ ಕಾಲಹರಣ ಮಾಡುವವರ ಈ ನಡವಳಿಕೆಗೆ ಸರ್ಕಾರ ಬ್ರೇಕ್ ಹಾಕಿ ಸುತ್ತೋಲೆ ಹೊರಡಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ವಿ.ಮಂಜುಲ ಅವರು ಈ ನಿಟ್ಟಿನಲ್ಲಿ ಬಿಗಿ ತರಲು ಸುತ್ತೋಲೆ ಹೊರಡಿಸಿದ್ದಾರೆ. ಕೆಲಸದ ವೇಳೆಯಲ್ಲಿ ಟೀ, ಕಾಫಿ ಬ್ರೇಕ್ ನೆಪದಲ್ಲಿ ಅನಗತ್ಯ ಕಾಲಹರಣ ಮಾಡುವವರಿಗೆ ಕೆಲವೊಂದು ಕಡ್ಡಾಯ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಜಿಲ್ಲಾ, ತಾಲೂಕು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿ, ನೌಕರರ ವಿರುದ್ಧ ಕಾಲಹರಣ ಆರೋಪ ಕೇಳಿಬಂದಿತ್ತು. ಕೆಲಸದ ವೇಳೆಯಲ್ಲಿ ಸರ್ಕಾರಿ ಕಚೇರಿಗಳ ಅಧಿಕಾರಿಗಳು, ನೌಕರರು ತಮ್ಮ ಸ್ಥಾನಗಳಲ್ಲಿ ಇರೋದಿಲ್ಲ ಎಂದು ಸಾರ್ವಜನಿಕರಿಂದ ಸರ್ಕಾರಕ್ಕೆ ಸಾಕಷ್ಟು ದೂರುಗಳು ತಲುಪಿದ್ದವು. ಈ ಹಿನ್ನೆಲೆಯಲ್ಲಿ ಅನಗತ್ಯ ಕಾಲಹರಣಕ್ಕೆ ಬ್ರೇಕ್ ಹಾಕಿ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.

ನಿಯಮಗಳೇನು?:
– ಇನ್ಮುಂದೆ ಅಧಿಕಾರಿಗಳು, ನೌಕರರು ಅನುಮತಿ ಇಲ್ಲದೆ ಕಚೇರಿಗಳಿಂದ ಹೊರಗೆ ಹೋಗುವಂತಿಲ್ಲ.
– ಹೊರಗೆ ಹೋಗಲು ಇನ್ಮುಂದೆ ಕಚೇರಿಗಳಲ್ಲಿ ಸಹಿ ಪುಸ್ತಕ ಇಟ್ಟಿರಬೇಕು.
– ಹೊರಗೆ ಹೋಗುವ ಅಧಿಕಾರಿ, ನೌಕರ ಆ ವಹಿ ಪುಸ್ತಕದಲ್ಲಿ ಕಾರಣ, ಹೋಗುವ, ಬರುವ ಸಮಯ ನಮೂದಿಸಿ ಹೋಗುವುದು ಕಡ್ಡಾಯ.
– ಅನಗತ್ಯವಾಗಿ ಕಚೇರಿ ವೆಳೆಯಲ್ಲಿ ಅಧಿಕಾರಿ, ನೌಕರರು ಹೊರಗೆ ಹೋಗುವಂತಿಲ್ಲ
– ವೈಯಕ್ತಿಕ ಕೆಲಸಗಳನ್ನು ವಿರಾಮದ ಸಮಯದಲ್ಲಿ ಮಾಡಿಕೊಳ್ಳಬೇಕು
– ಸಹಿ ಪುಸ್ತಕದಲ್ಲಿ ನಮೂದಿಸದೇ ಹೊರಗೆ ಹೋದರೆ ಕ್ರಮ
– ಅಧಿಕಾರಿ, ನೌಕರರ ಮೇಲೆ ಆಯಾಯಾ ಕಚೇರಿ ಅಥವಾ ಶಾಖೆಗಳ ಮುಖ್ಯಸ್ಥರ ಕಣ್ಗಾವಲು ಇರಲಿದೆ
– ಕಚೇರಿ ಒಳಗೆ ಇನ್ಮುಂದೆ ಕಚೇರಿ ಅಥವಾ ಶಾಖಾ ಮುಖ್ಯಸ್ಥರು ಆಗಾಗ ಪರಿಶೀಲಿಸುತ್ತಿರಬೇಕು.
– ಕರ್ತವ್ಯ ವೇಳೆ ಅಧಿಕಾರಿ, ನೌಕರ ಸ್ಥಾನದಲ್ಲಿ ಇಲ್ಲದಿದ್ದರೆ ಮುಲಾಜಿಲ್ಲದೇ ಕ್ರಮ

Comments

Leave a Reply

Your email address will not be published. Required fields are marked *