ದೆಹಲಿಯಲ್ಲಿ ಮತ್ತೆ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡಿನ ದಾಳಿ

– ಬೈಕಿನಲ್ಲಿ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು

ನವದೆಹಲಿ: ಜಾಮಿಯಾ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು ನಡೆದ ಗುಂಡಿನ ದಾಳಿ ಮಾಸುವ ಮುನ್ನವೇ ದೆಹಲಿಯಲ್ಲಿ ಮತ್ತೆ ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ.

ಕಳೆದ ತಿಂಗಳ ಜನವರಿ 30 ರಂದು ಜಾಮಿಯಾ ವಿವಿ ಬಳಿ ಮೆರವಣಿಗೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಈಗ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು, ಈಶಾನ್ಯ ದೆಹಲಿಯ ಜಾಫ್ರಾಬಾದ್‍ನಲ್ಲಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಾಲ್ಕು ಬಾರಿ ಗುಂಡಿನ ದಾಳಿ ಮಾಡಿ ಪರಾರಿ ಆಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಜಾಫ್ರಾಬಾದ್‍ನಲ್ಲಿ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದು, ಈ ಘಟನ ಸ್ಥಳಕ್ಕೆ ಬೈಕಿನಲ್ಲಿ ಬಂದ ಇಬ್ಬರು, ಘಟನ ಸ್ಥಳದಿಂದ 400 ಮೀಟರ್ ದೂರದಲ್ಲಿ ನಿಂತು ಗುಂಡಿನ ದಾಳಿ ಮಾಡಿದ್ದಾರೆ. ಆದರೆ ಗುಂಡಿನ ದಾಳಿಯಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಗುಂಡಿನ ದಾಳಿ ಬಳಿಕ ಪ್ರತ್ಯಕ್ಷದರ್ಶಿಯೋರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು, ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಈ ಗುಂಡಿನ ದಾಳಿಗೂ ಪೌರತ್ವ ವಿರೋಧಿಪ್ರತಿಭಟನಾಕಾರರು ಪ್ರತಿಭಟನಾಕಾರರಿಗೂ ಯಾವುದೇ ಸಂಬಂಧವಿಲ್ಲ. ಇದು ವೈಯಕ್ತಿಕ ಕಾರಣದಿಂದ ನಡೆದಿರುವ ಗುಂಡಿನ ದಾಳಿ ಎಂದು ಹೇಳಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ನಡೆದ ನಾಲ್ಕನೇ ಗುಂಡಿನ ದಾಳಿ ಆಗಿದ್ದು, ಕಳೆದ ಜನವರಿಯ 30 ರಂದು ಮೊದಲ ಬಾರಿಗೆ ನಾನು ನಿಮಗೆ ಅಜಾದಿ ನೀಡುತ್ತೇನೆ ಎಂದು ಜಾಮಿಯಾ ವಿವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ಮಾಡಿದ್ದ. ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದ.

ಈ ಘಟನೆಯ ನಂತರ ಫೆ.1 ರಂದು ಕಪಿಲ್ ಗುಜ್ಜರ್ ದೆಹಲಿಯ ಶಾಹೀನ್ ಬಾಗ್‍ನಲ್ಲಿ ಪ್ರತಿಭಟನೆ ಮಾಡುತ್ತಿದ್ದವ ಮೇಲೆ ಗುಂಡಿನ ದಾಳಿ ಮಾಡಿದ್ದನು. ಈ ಘಟನೆಯಾದ ಎರಡೆ ದಿನದಲ್ಲಿ ಅಂದರೆ ಫೆ.3 ರಂದು ಮತ್ತೆ ಜಾಮಿಯಾ ವಿವಿಯ ಐದನೇ ಗೇಟ್ ಬಳಿ ಕೆಂಪು ಬಣ್ಣದ ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದ. ಈ ಮೂರು ಘಟನೆಯ ಬೆನ್ನಲ್ಲೇ ಇಂದು ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *