ಖಾಯಂ ಗಿರಾಕಿಗಳಿಗಷ್ಟೇ ಲಾಟರಿ ಮಾರುತ್ತಿದ್ದವ ಅರೆಸ್ಟ್

ಚಾಮರಾಜನಗರ: ಖಾಯಂ ಗಿರಾಕಿಗಳಿಗಷ್ಟೇ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಹನೂರು ತಾಲೂಕಿನ ನಾಲಾರೋಡಿನಲ್ಲಿ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ಮಾರ್ಟಳ್ಳಿ ಗ್ರಾಮದ ಮೊದಲೈ ಮುತ್ತು ಬಂಧಿತ ಆರೋಪಿ. ಕೇರಳದ ಪಾಲಕ್ಕಾಡ್‍ನಿಂದ ಲಾಟರಿಗಳನ್ನು ತಂದು ಅಕ್ರಮವಾಗಿ ಖಾಯಂ ಗ್ರಾಹಕರಿಗಷ್ಟೇ ಮಾರಾಟ ಮಾಡುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯಿಂದ 30 ರೂ. ಮುಖಬೆಲೆಯ 2870 ಲಾಟರಿ ಟಿಕೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 86 ಸಾವಿರ ರೂ. ಎಂದು ತಿಳಿದುಬಂದಿದೆ.

ಕಳೆದ ತಿಂಗಳಿನಲ್ಲಿ ಮೈಸೂರಿನಿಂದ ಬಂದು ಹನೂರ ಭಾಗದಲ್ಲಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಹಲವು ಮಾರಾಟಗಾರರ ಹೆಸರನ್ನು ಆತ ಹೇಳಿದ್ದನು. ಹೀಗಾಗಿ ಇನ್ನಷ್ಟು ಖದೀಮರು ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ರಾಮಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *