ಸುಧಾಕರ್ ಕನಸಿನ ಯೋಜನೆ ಎಚ್‍ಎನ್ ವ್ಯಾಲಿ ಸಾಕಾರ- ಸಿದ್ದರಾಮಯ್ಯ ಸಂತಸ

– ಸುಧಾಕರ್ ಸಚಿವರಾದ ದಿನವೇ ಕಂದವಾರದ ಕೆರೆಗೆ ನೀರು

ಚಿಕ್ಕಬಳ್ಳಾಪುರ: ಬಯಲುಸೀಮೆ ಬರ ಪೀಡಿತ ಜಿಲ್ಲೆಗಳ ಜನರ ಬದುಕಿಗೆ ಆಶಾದಾಕವಾದ ಎಚ್‍ಎನ್ ವ್ಯಾಲಿ ಯೋಜನೆ ಸಾಕಾರಗೊಂಡಿದೆ. ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದ ಎಚ್‍ಎನ್ ವ್ಯಾಲಿ ಹೆಬ್ಬಾಳ-ನಾಗವಾರ ಕೆರೆಗಳ ಏತ ನೀರಾವರಿ ಯೋಜನೆಯ ನೀರು ಇಂದು ಚಿಕ್ಕಬಳ್ಳಾಪುರ ದ ಕಂದವಾರ ಕೆರೆಗೆ ಹರಿದುಬಂದಿದೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಚಿಕ್ಕಬಳ್ಳಾಪುರ ಭಾಗದ ನೀರಿನ ಸಮಸ್ಯೆ ಪರಿಹರಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ 44 ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ರೂ. ವೆಚ್ಚದ ಎನ್‍ಎಚ್ ವ್ಯಾಲಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದೆ. ಯೋಜನೆಯ ಕಾಮಗಾರಿ ಪೂರ್ಣಗೊಂಡು ಇಂದು ಕಂದವಾರ ಕೆರೆಗೆ ನೀರು ಹರಿಯುತ್ತಿರುವುದು ನನ್ನಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದ್ದಾರೆ.

ಬೆಳಗ್ಗೆಯಿಂಲೂ ತಿರ್ನಹಳ್ಳಿ-ಮುದ್ದೇನಹಳ್ಳಿ ರಸ್ತೆಯ ಬಂಡಹಳ್ಳಿ ಕ್ರಾಸ್ ಬಳಿಯ ಓಪನ್ ಛೆಂಬರ್ ಮೂಲಕ ಕಂದವಾರ ಕೆರೆಗೆ ನೀರು ಹರಿದುಬರುತ್ತಿದೆ. ಹೀಗಾಗಿ ಬಂಡಹಳ್ಳಿ ಕ್ರಾಸ್ ಬಳಿ ಜನ ತಂಡೋಪ ತಂಡವಾಗಿ ಆಗಮಿಸಿ ನೀರಿನ ಆಗಮನ ಕಂಡು ಆನಂದಿಸುತ್ತಿದ್ದಾರೆ. ಈ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕರಾಗಿದ್ದ ಸುಧಾಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಾಕಷ್ಟು ಶ್ರಮ ಹಾಕಿ ಯೋಜನೆಯನ್ನ ಜಾರಿಮಾಡಿಸಿಕೊಂಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಚಿಕ್ಕಬಳ್ಳಾಪುರದ ಹಾಲಿ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾಗಿದೆ.

ಇತ್ತ ಸುಧಾಕರ್ ಅವರು ಸಚಿವರಾದ ಇಂದೇ ಚಿಕ್ಕಬಳ್ಳಾಪುರದ ಕಂದವಾರದ ಕೆರೆಗೆ ಎಚ್‍ಎನ್ ವ್ಯಾಲಿ ನೀರು ಸಹ ಹರಿದುಬಂದಿರುವುದು ಜಿಲ್ಲೆಯ ಜನರ ಸಂತಸ ಮತ್ತಷ್ಟು ಹೆಚ್ಚು ಮಾಡಿದೆ. ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ವೃದ್ಧಿಸುವ ಯೋಜನೆ ಇದಾಗಿದೆ.

Comments

Leave a Reply

Your email address will not be published. Required fields are marked *