ಲಾರಿ ಡಿಕ್ಕಿ ಹೊಡೆದು ಮೂರು ಪಲ್ಟಿಯಾದ ಆಟೋ – ಸ್ನೇಹಿತರು ದುರ್ಮರಣ

ಮಂಡ್ಯ: ಪ್ಯಾಸೆಂಜರ್ ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ದುಂಡನಹಳ್ಳಿ ಬಳಿ ನಡೆದಿದೆ.

ಮಂಗಳವಾರ ತಡರಾತ್ರಿ ಮದ್ದೂರು ಮತ್ತು ತುಮಕೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಪ್ರಶಾಂತ್ (25), ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ನಿವಾಸಿ ಸೂರ್ಯ (24) ಹಾಗೂ ದುಂಡನಹಳ್ಳಿ ಗ್ರಾಮದ ಅಭಿ (25) ಮೃತ ಯುವಕರು. ಈ ಮೂವರು ಸಹ ಸ್ನೇಹಿತರು ಎಂದು ಹೇಳಲಾಗುತ್ತಿದೆ.

ಮಂಗಳವಾರ ರಾತ್ರಿ ಸುಮಾರು 11.30ಕ್ಕೆ ಪ್ರಶಾಂತ್, ಸೂರ್ಯ ಮತ್ತು ಅಭಿ ಮೂವರು ದುಂಡನಹಳ್ಳಿಯಿಂದ ಅವರದ್ದೇ ಆಟೋದಲ್ಲಿ ಮದ್ದೂರು ಭಾಗಕ್ಕೆ ಹೋಗುತ್ತಿದ್ದರು. ಆದರೆ ದುಂಡನಹಳ್ಳಿ ಬಳಿ ಮದ್ದೂರಿನಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದ ಲಾರಿ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಮೂರು ಪಲ್ಟಿ ಹೊಡೆದಿದೆ. ಆಟೋ ಪಲ್ಟಿಯಾದ ಪರಿಣಾಮ ಆಟೋದಲ್ಲಿದ್ದ ಮೂವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತವಾದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಮೂವರು ಸ್ನೇಹಿತರು ಮನೆಯಿಂದ ಎಲ್ಲಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿಲ್ಲ. ಈ ಕುರಿತು ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *