ನನ್ನನ್ನು ಸೋಲಿಸಿದ್ದು ಬಿಜೆಪಿ, ನಾನ್ಯಾರ ಹಂಗಿನಲ್ಲೂ ಇಲ್ಲ: ಎಂಟಿಬಿ

ಬೆಂಗಳೂರು: ನನ್ನನ್ನ ಸೋಲಿಸಿದ್ದೇ ಬಿಜೆಪಿ. ಅವರ ಪಕ್ಷದವರೇ ನನ್ನನ್ನು ಉಪ ಚುನಾವಣೆಯಲ್ಲಿ ಸೋಲಿಸಿದರು ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಸ್ವಪಕ್ಷದ ವಿರುದ್ಧವೇ ಹರಿ ಹಾಯ್ದಿದ್ದಾರೆ.

ನಗರದಲ್ಲಿ ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಸೋಲು ಸೋಲಲ್ಲ ಅದು ನನ್ನ ಗೆಲುವು. ಶರತ್ ಹಾಗೂ ಅವರ ಮಗ ಬಚ್ಚೇಗೌಡರು ನನ್ನ ವಿರುದ್ಧ ಕೆಲಸ ಮಾಡಿದರು. ಅವರ ವಿರುದ್ಧ ಯಾವಾಗ ಕ್ರಮ ತಗೆದುಕೊಳ್ಳುತ್ತಾರೆ ಕಾದು ನೋಡ್ತೀನಿ ಎಂದಿದ್ದಾರೆ. ನನ್ನನ್ನು ಸಚಿವರನ್ನಾಗಿ ಮಾಡ್ತೀನಿ ಅಂತ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ. ಕಾದು ನೋಡ್ತೀನಿ ಯಾವಾಗ ಮಾಡ್ತಾರೆ ಅಂತ. 17 ಜನರಿಂದಾಗಿ ಈ ಸರ್ಕಾರ ಬಂದಿದೆ. ಆದ್ದರಿಂದ 17 ಜನರನ್ನು ಒಂದೇ ರೀತಿ ನೋಡಬೇಕು ಸೋತವರು, ಗೆದ್ದವರು ಅನ್ನೋ ಬೇಧ ಮಾಡಬಾರದು ಎಂದು ತಿಳಿಸಿದರು.

ನಾನು ಸತ್ಯ ಹೇಳಲು ಯಾವಾಗಲೂ ಹೆದರಲ್ಲ. ನನ್ನದು ಏನಿದ್ದರೂ ನೇರ ಮಾತು. ನಾನು ಕಾಂಗ್ರೆಸ್ಸಿನಲ್ಲಿ ಇದ್ದಾಗಲು ಹೀಗೆ ಇದ್ದೆ, ಇಲ್ಲೂ ಹೀಗೆ ಇದ್ದೇನೆ. ಕಡ್ಡಿ ತುಂಡಾದಂತೆ ಮಾತನಾಡ್ತೇನೆ. ಅದೇ ರೀತಿ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.

ನನ್ನನ್ನ ಯಾವಾಗ ಸಚಿವರನ್ನಾಗಿ ಮಾಡ್ತಾರೆ ಕಾದು ನೋಡುತ್ತೇನೆ. ಇಲ್ಲದಿದ್ದರೆ ಏನು ತೀರ್ಮಾನ ಕೈಗೊಳ್ಳಬೇಕೋ ಅದನ್ನ ಕೈಗೊಳ್ಳುತ್ತೇನೆ. ಕಡ್ಡಿ ತುಂಡಾದಂತೆ ತೀರ್ಮಾನ ಕೈಗೊಳ್ಳುವ ಪರಿಸ್ಥಿತಿ ಎದುರಾದರೆ ಹಾಗೆಯೇ ತೀರ್ಮಾನ ಕೈಗೊಳ್ಳುತ್ತೇನೆ. ನನಗೆ ಯಾರ ಭಯವೂ ಇಲ್ಲ. ಯಾರ ಮುಲಾಜು ಇಲ್ಲ. ನಾನು ಯಾರ ಹಂಗಿನಲ್ಲೂ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *