ಪ್ರೀತ್ಸೆ ಪ್ರೀತ್ಸೆ ಎಂದು ಅಪ್ರಾಪ್ತೆಯನ್ನ ಕಾಡುತ್ತಿದ್ದ ಯುವಕ ಅಂದರ್

ಮೈಸೂರು: ಅಪ್ರಾಪ್ತೆ ಹಿಂದೆ ಬಿದ್ದು ಪ್ರೀತ್ಸೆ ಪ್ರೀತ್ಸೆ ಅಂತ ಗಲಾಟೆ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ನಿವಾಸಿ ರಾಮಚಂದ್ರ (18) ಬಂಧಿತ ಆರೋಪಿ. ರಾಮಚಂದ್ರ ತನ್ನ ಗ್ರಾಮದ 8ನೇ ತರಗತಿಯ ಬಾಲಕಿ ಹಿಂದೆ ಬಿದ್ದಿದ್ದ. ತನ್ನನ್ನು ಪ್ರೀತಿಸುವಂತೆ ಬಾಲಕಿಗೆ ಒತ್ತಾಯಿಸಿದ್ದ. ಅಷ್ಟೇ ಅಲ್ಲ ತನ್ನ ಪ್ರೀತಿಯನ್ನು ನಿರಾಕರಿಸಿದರೆ ಆ್ಯಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ.

ಆರೋಪಿ ರಾಮಚಂದ್ರ ಕೆಲ ದಿನಗಳ ಹಿಂದೆ ಬಾಲಕಿಯ ಮನೆಗೆ ನುಗ್ಗಿ ಆಕೆಯನ್ನು ಎಳೆದಾಡಿದ್ದ. ಈ ವೇಳೆ ಮನೆಯ ಬೀರು ಬೀಳಿಸಿ ದಾಂಧಲೆ ಮಾಡಿದ್ದ. ಇದರ ಜೊತೆಗೆ ಆರೋಪಿಯು ಸೈಕೋ ರೀತಿ ವರ್ತಿಸಿ ತನ್ನ ಕೈ ಕುಯ್ದುಕೊಂಡಿದ್ದ.

ರಾಮಚಂದ್ರನ ವರ್ತನೆಯಿಂದ ಬೇಸತ್ತ ಬಾಲಕಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹುಣಸೂರು ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments

Leave a Reply

Your email address will not be published. Required fields are marked *