ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

–  ಬಿಜೆಪಿ, ಸಂಘ ಪರಿವಾರ, ಪೊಲೀಸರ ವಿರುದ್ಧ ಕಿಡಿ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ, ಕೇಂದ್ರ ಸರ್ಕಾರ, ಆರ್‌ಎಸ್‌ಎಸ್‌ ಮತ್ತು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.

ಮಂಗಳೂರಿಗೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಘಟನೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಖಾರವಾಗಿ ಪ್ರತಿಕ್ರಿಯೆ ನೀಡಿದರು. ಮೈತ್ರಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಕರಾವಳಿ ಶಾಂತವಾಗಿತ್ತು. ಕೇಂದ್ರದ ಸಿಎಎ, ಎನ್‍ಆರ್‌ಸಿ ನಿರ್ಧಾರದಿಂದ ಇಷ್ಟೆಲ್ಲ ಆತಂಕ ಆಗುತ್ತಿದೆ. ಕಾಯ್ದೆ ಪ್ರೋತ್ಸಾಹಿಸುವ ಮೂಲಕ ಭಯ ಪ್ರೋತ್ಸಾಹಿಸುವ ಹಿಂದೂಪರ ಸಂಘಟನೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಎಚ್‍ಡಿಕೆಗಾಗಿ ಅರ್ಧ ಗಂಟೆ ಕಾದು ಭೇಟಿಯಾದ ಮಂಗ್ಳೂರು ಪೊಲೀಸ್ ಆಯುಕ್ತ ಹರ್ಷ

ಬಿಜೆಪಿ ಸರ್ಕಾರವಿದ್ದಾಗ ಹಿಂದೆ ಚರ್ಚ್ ದಾಳಿ ಘಟನೆ ನಡೆದಿತ್ತು. ಈಗ ಪೌರತ್ವ ಕಾಯ್ದೆ ಕಾನೂನಿಂದ ಅಶಾಂತಿ ಶುರುವಾಗಿದೆ ಎಂದರು.

ಬಾಂಬ್ ನಿಷ್ಕ್ರಿಯ ಮಾಡಲು ಇಡೀ ದಿನ ಬೇಕಾಯಿತು. ತಜ್ಞರು ಇದ್ದರೂ ಇಷ್ಟೆಲ್ಲಾ ತಡವಾಗಲು ಕಾರಣವೇನು? ಒಂದು ಬಾಂಬ್ ನಿಷ್ಕ್ರಿಯ ಮಾಡಲು ಇಷ್ಟೆಲ್ಲಾ ನಾಟಕ ಮಾಡುವ ಅವಶ್ಯಕತೆ ಇತ್ತಾ? ದಿನಪೂರ್ತಿ ಇಡೀ ರಾಜ್ಯವನ್ನು ಮಾಧ್ಯಮಗಳ ಮೂಲಕ ಪೊಲೀಸರು ದಿಕ್ಕು ತಪ್ಪಿಸಿದರು. ಜನ ಪ್ಯಾನಿಕ್ ಆಗುವಂತೆ ಮಾಡಿದರು ಎಂದು ಆರೋಪಿಸಿದರು.

ಪಟಾಕಿಗೆ ಬಳಸುವ ಮಿಣಿಮಿಣಿ:
ಬಾಂಬ್ ಒಳಗೆ ಪಟಾಕಿಗೆ ಬಳಸುವ ಮಿಣಿ ಮಿಣಿ ಪೌಡರ್ ತುಂಬಿದ್ದರು. ಸ್ಟೀಲ್ ಬಾಕ್ಸ್ ಒಳಗೆ ತುಂಡಾದ ವಯರ್ ಇತ್ತು. ಬಾಂಬ್ ಸಾಗಾಟಕ್ಕೆ ಕಂಟೈನರ್ ಬಳಸಲಾಗಿತ್ತು. ಮುಖಕ್ಕೆ ಹಚ್ಚುವ ಪೌಡರ್ ತುಂಬಿದ್ರೋ ಏನೋ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು. ಮಂಗಳೂರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದಂದು ಮಾಡುವ ಅಣುಕು ಪ್ರದರ್ಶನದಂತೆ ಇತ್ತು ಎಂದರು.

ರಾಜ್ಯದಲ್ಲಿ ಸಂಘದ ಸರ್ಕಾರವಿಲ್ಲ:
ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್‌ ಸರ್ಕಾರ ಇಲ್ಲ ಎಂದು ಚಾಟಿ ಬೀಸಿದ ಕುಮಾರಸ್ವಾಮಿ, ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಡಿ. ನನ್ನ ಬಗ್ಗೆ ಯಾವುದೇ ಟೀಕೆ ಬಂದರೂ ಹೆದರಲ್ಲ ಎಂದರು.

ಇದೇ ವೇಳೆ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ಅವರು, ನನ್ನನ್ನು ಪ್ರಶ್ನೆ ಮಾಡುತ್ತಾರೆ. ನೀವು ನನಗೆ ಕೆಲಸ ಕೊಡಬೇಡಿ. ಸಂಘರ್ಷ ಹುಟ್ಟಿಸುವ ಕೆಲಸ ಮಾಡಬೇಡಿ. ಮಂಗಳೂರು ನಗರವನ್ನು ಹಾಳು ಮಾಡಬೇಡಿ. ಬಾಂಬ್ ಪ್ರಹಸನದ ಸತ್ಯಾಸತ್ಯತೆ ಹೊರಹಾಕಿ. ಎರಡು ಧರ್ಮದ ನಡುವೆ ಕಂದಕ ಉಂಟು ಮಾಡಲು ಬಾಂಬ್ ಇಡುವ ಪ್ರಹಸನ ನಡೆದಿದೆ ಎಂದು ಹೇಳಿದರು.

ಮಂಗಳೂರಿಗೆ ಬೆಂಕಿ ಇಡಬೇಡಿ ಎಂದ ಕುಮಾರಸ್ವಾಮಿ, ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನ್ನದು ಹಾಗೂ ಎಲ್ಲರ ಮಂಪರು ಪರೀಕ್ಷೆ ಮಾಡಿಸಲಿ. ಬಿಜೆಪಿ 130 ಕೋಟಿ ಜನರ ಮಂಪರು ಪರೀಕ್ಷೆ ಮಾಡಲು ಹೊರಟಿದೆ ಎಂದು ಕಿಡಿ ಕಾರಿದರು. ಆದರೆ ಕುಮಾರಸ್ವಾಮಿ ಅವರು ಮಂಗಳೂರು ನಗರ ಕಮಿಷನರ್ ಹರ್ಷಾ ಅವರ ಭೇಟಿ ಬಗ್ಗೆ ಗೌಪ್ಯತೆ ಕಾಪಾಡಿದರು.

ವಿಮಾನ ನಿಲ್ದಾಣದ್ಲಲಿ ಸಿಸಿಟಿವಿ ಆಫ್ ಮಾಡಿದ್ರಾ?
ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಸಿಟಿವಿ ಇಲ್ವಾ? ಸಿಸಿಟಿವಿ ನಿಷ್ಕ್ರಿಯ ವಿಚಾರ ಸತ್ಯಾಸತ್ಯತೆ ಹೊರಬರಲಿ. ಸಿಸಿಟಿವಿ ಆಫ್ ಮಾಡಿದ್ಯಾರು? ನೆನ್ನೆ ಪ್ರಹಸನಕ್ಕಾಗಿ ಸಿಸಿಟಿವಿ ಆಫ್ ಮಾಡಿದ್ರಾ? ಕೇಂದ್ರ ವಿಮಾನಯಾನ ಸಚಿವರು ಉತ್ತರಿಸಲಿ ಎಂದು ಕುಮಾರಸ್ವಾಮಿ ಸವಾಲೆಸೆದರು. ಬಿಜೆಪಿ ಸರ್ಕಾರ ಆರ್‌ಎಸ್‌ಎಸ್‌ ಮಾರ್ಗದರ್ಶನದಲ್ಲಿ ಕೆಲಸ ಮಾಡಬಾರದು ಎಂದು ಕುಟುಕಿದರು.

Comments

Leave a Reply

Your email address will not be published. Required fields are marked *