ಮೋದಿ ಪರೀಕ್ಷಾ ಪೆ ಚರ್ಚಾಗೆ ಗದಗ ವಿದ್ಯಾರ್ಥಿ ಆಯ್ಕೆ

ಗದಗ: ದೇಶದ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸುವ ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ವಿದ್ಯಾರ್ಥಿ ಆಯ್ಕೆ ಆಗಿದ್ದಾನೆ.

ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಅಭಯ್ ರಂಗ್ರೇಜಿ ಆಯ್ಕೆಯಾಗಿದ್ದಾನೆ. ಈ ಮೂಲಕ ಗದಗ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.

ವಿದ್ಯಾರ್ಥಿ ಸಂವಾದಕ್ಕೆ ಆಯ್ಕೆಯಾಗಿದ್ದಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 9 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಆನ್ ಲೈನ್ ಮೂಲಕ ಇಂಗ್ಲಿಷ್ ನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. 23 ರಂದು ಸಂವಾದ ನಡೆಯಲಿದ್ದು, ಇದಕ್ಕಾಗಿ ಆಯ್ಕೆ ಮಾಡಲು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪ್ರಧಾನಿ ಮೋದಿಯೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಕಳುಹಿಸಲಾಗುತ್ತಿದೆ.

ಜಿಲ್ಲೆಯ ವಿದ್ಯಾರ್ಥಿ ‘ಯುವರ್ ಫ್ಯೂಚರ್ ದಿ ಫ್ರೆಂಡ್ಸ್ ಆನ್ ಯುವರ್ ಆಸ್ಪಿರೇಷನ್ಸ್’ ವಿಷಯ ಕುರಿತು ಆನ್ ಲೈನ್ ನಲ್ಲಿ 500 ಪದಗಳ ಪ್ರಬಂಧ ಮಂಡಿಸಿದ್ದ. ಗದಗ ಜಿಲ್ಲೆಯ ಆದರ್ಶ ಶಾಲೆಯ 68 ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಪ್ರಬಂಧ ಬರೆದಿದ್ದು, ದಾಖಲೆಯಾಗಿದೆ. ಮೋದಿ ಜೊತೆ ಸಂವಾದಕ್ಕೆ ಆಯ್ಕೆಯಾದ ವಿದ್ಯಾರ್ಥಿ ಸಾಧನೆಗೆ ಸ್ಥಳಿಯ ಶಾಸಕ ಕಳಕಪ್ಪ ಬಂಡಿ ಸಹ ಸಿಹಿ ತಿನಿಸಿ ಅಭಿನಂದಿಸಿದ್ದಾರೆ.

ಅಭಯ್ ಈ ಕುರಿತು ಪ್ರತಿಕ್ರಿಯಿಸಿ, ಕಾರ್ಯಕ್ರಮದಲ್ಲಿ ಭಾಗವಹಿದ ಬಳಿಕ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾತಾವರಣ ನಿರ್ಮಿಸಲು, ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಡಿಜಿಟಲ್ ಲೈಬ್ರರಿ ತೆರೆಯಬೇಕೆಂದು ಪ್ರಧಾನಿ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾನೆ.

Comments

Leave a Reply

Your email address will not be published. Required fields are marked *