ಉಡುಪಿ ಎಂಜಿಎಂ ಕಾಲೇಜಿನಲ್ಲಿ ಮಾಲ್ಗುಡಿ ಡೇಸ್ ಚಿತ್ರತಂಡದ ಕಟ್ಟೆ ಪಂಚಾತಿಕೆ

ಉಡುಪಿ: ಮಾಲ್ಗುಡಿ ಡೇಸ್ ಚಿತ್ರದಲ್ಲಿ ಬ್ಯುಸಿ ಇರುವ ವಿಜಯ್ ರಾಘವೇಂದ್ರ ತಮ್ಮ ತಂಡದ ಜೊತೆ ಕಟ್ಟೆ ಪಂಚಾತಿಕೆ ಮಾಡಿದ್ದಾರೆ.

ಉಡುಪಿ ನಗರದ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯು ಆಯೋಜಿಸಿದ್ದ ಕಟ್ಟೆ ಪಂಚಾತಿಕೆ ಮಾತುಕತೆ ಸರಣಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ.

ಭಾಷೆ, ಬಟ್ಟೆ, ಅನುಕೂಲತೆಗಳನ್ನು ಹೆಚ್ಚಿಸಿಕೊಂಡ ಕೂಡಲೇ ನಾವು ಆಧುನಿಕರಾಗುವುದಿಲ್ಲ. ಹಳೆಯದನ್ನೂ ಅನುಸರಿಸುತ್ತ ಇವತ್ತಿಗೂ ಬೇಕಾಗುವಂತೆ ಬದುಕುವುದೇ ಆದರ್ಶ ಜೀವನ. ಆಧುನಿಕತೆಯ ಬೇರು ಹಳತರಲ್ಲಿದೆ ಎಂದು ವಿಜಯ ರಾಘವೇಂದ್ರ ಹೇಳಿದರು. ದುಡ್ಡು ಮತ್ತು ಅಭಿರುಚಿಯ ಕುರಿತು ಅನೇಕರಲ್ಲಿ ಗೊಂದಲಗಳಿವೆ. ಹಣದ ಹಿಂದೆ ಹೋದಾಗ ಬುದ್ಧಿ ಕೆಲಸ ಮಾಡುತ್ತದೆಯೇ ವಿನಃ ಮನಸ್ಸು ಜೊತೆಗಿರುವುದಿಲ್ಲ. ನಮ್ಮ ಆಸಕ್ತಿಯ ಹಿಂದೆಯೇ ಬಿದ್ದಾಗ ಕಷ್ಟಗಳೂ ಕೇವಲವಾಗಿ ಬಿಡುತ್ತವೆ. ಎತ್ತರದ ಸಾಧನೆ ಸಾಧ್ಯ. ಸೋಲು ಬದುಕಿನ ಒಂದು ಭಾಗವಷ್ಟೇ ಎಂದು ವಿಜಯ ರಾಘವೇಂದ್ರ ಹೇಳಿದರು.

ವಿದ್ಯಾರ್ಥಿಗಳ ಜೊತೆ ಚಿತ್ರದ ಬಗ್ಗೆ, ತಮ್ಮ ಬಾಲ್ಯ, ಕಾಲೇಜು ದಿನಗಳನ್ನು ಮೆಲುಕು ಹಾಕಿಕೊಂಡರು. ಕಾರ್ಯಕ್ರಮ ಮುಗಿದ ಮೇಲೆ ರಾಘು ಜೊತೆ ವಿದ್ಯಾರ್ಥಿಗಳು ಸೆಲ್ಫಿ ಕ್ಲಿಕ್ ಮಾಡಿ, ಎರಡು ಸ್ಟೆಪ್ ಹಾಕಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಲ್ಗುಡಿ ಡೇಸ್ ಚಿತ್ರದ ನಿರ್ದೇಶಕ ಕಿಶೋರ್ ಮೂಡಬಿದ್ರೆ, ನಿರ್ಮಾಪಕ ರವಿಶಂಕರ್, ನಾಯಕಿ ಗ್ರೀಷ್ಮ ಜೊತೆಗಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಅಧ್ಯಕ್ಷ ಶ್ರೇಯಸ್ ಕೋಟ್ಯಾನ್ ಪಂಚಾತಿಕೆಯ ನಿರೂಪಣೆ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಹಿಮಾ ಶೆಣೈ ವಂದಿಸಿದರು.

Comments

Leave a Reply

Your email address will not be published. Required fields are marked *