ಸುಳ್ಳು ಸುದ್ದಿ ಶೇರ್ ಮಾಡಿದ್ರೆ ಹುಷಾರ್ – ಯಾದಗಿರಿ ಎಸ್‍ಪಿ ಖಡಕ್ ವಾರ್ನಿಂಗ್

ಯಾದಗಿರಿ: ಫೇಸ್‍ಬುಕ್ ಮತ್ತು ವಾಟ್ಸಾಪ್ ಗ್ರೂಪ್‍ಗಳಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಹೆಸರಿನಲ್ಲಿ ಜನವರಿ 15ರಿಂದ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಮತ್ತು ಬೇರೆಯವರಿಗೆ ಕಳುಹಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಒಂದು ವಾರಗಳಿಂದ ಯಾದಗಿರಿ ಜಿಲ್ಲಾ ಪೊಲೀಸ್ ಪ್ರಕಟಣೆ ಎಂದು ನಮೂದಿಸಿ,  “ಯಾರಾದರು ಮನೆ ಹತ್ತಿರ ಬಂದು ನಾವು ಸರ್ಕಾರಿ ಆಸ್ಪತ್ರೆಯಿಂದ ಬಂದಿದ್ದೇವೆ. ಇನ್ಸುಲಿನ್, ವಿಟಾಮಿನ್ ಇಂಜೆಕ್ಷನ್ ಮಾಡ್ತೀವಿ ಅಂದು ಹೇಳಿದರೆ ಮಾಡಿಸಿಕೊಳ್ಳದಿರಿ. ಜಿಹಾದಿ ಟೆರರಿಸ್ಟ್ ಗಳು ಈ ರೀತಿ ಯಾಮಾರಿಸಿ ಹಿಂದೂಗಳಿಗೆ ಏಡ್ಸ್ ಇಂಜೆಕ್ಷನ್ ಕೊಡುತ್ತಿದ್ದಾರೆಂತೆ ಜಾಗೃತರಾಗಿರಿ. ನಿಮಗೆ ಸಂಬಂಧಿಸಿದ ಎಲ್ಲಾ ಗ್ರೂಪ್‍ಗಳಿಗೆ ಕಳುಹಿಸಿ ಅಮಾಯಕರ ಪ್ರಾಣ ಉಳಿಸಿರಿ” ಎಂದು  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲಿ ಸುಳ್ಳು ಸಂದೇಶ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದು ಜಿಲ್ಲಾ ಪೊಲೀಸ್ ಇಲಾಖೆಗೆ ಮುಜುಗರದ ಸಂಗತಿಯಾಗಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಅಥವಾ ಶೇರ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‍ಪಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *