ಯಾವ್ ಚರ್ಚೆಯಾದ್ರೆ ನಮಗೇನು? ಸಭೆಯಲ್ಲಿ ಮೊಬೈಲ್‍ಗೆ ಅಂಟಿಕೊಂಡ ಅಧಿಕಾರಿಗಳು

ರಾಮನಗರ: ಯಾರಿಗೆ ಏನಾದ್ರೇ ನಮಗೇನೂ, ಯಾವುದರ ಬಗ್ಗೆ ಚರ್ಚೆ ನಡೆದ್ರೆ ನಮಗೇನೂ ಅನ್ನೋ ರೀತಿಯಲ್ಲಿ ಅಧಿಕಾರಿಗಳು ಫೇಸ್‍ಬುಕ್, ವಾಟ್ಸಪ್ ಚಾಟಿಂಗ್, ಆನ್‍ಲೈನ್ ಶಾಫಿಂಗ್ ನಲ್ಲಿ ಮೊಬೈಲ್‍ಗೆ ಅಂಟಿಕೊಂಡಿದ್ದ ಘಟನೆ ರಾಮನಗರ ಜಿಲ್ಲಾ ಪಂಚಾಯತ್‍ನಲ್ಲಿ ಸಂಸದ ಡಿಕೆ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ನಡೆದಿದೆ.

ರಾಮನಗರ ಜಿಲ್ಲಾ ಪಂಚಾಯತ್ ಭವನದಲ್ಲಿ ಇಂದು ಕೇಂದ್ರ ಪುರಸ್ಕೃತ ಯೋಜನೆಗಳ ತ್ರೈಮಾಸಿಕ ಜಿಲ್ಲಾ ಅಭಿವೃದ್ದಿ ಹಾಗೂ ಸಮನ್ವಯ ಹಾಗೂ ಉಸ್ತುವಾರಿ ಸಭೆ (ದಿಶಾ)ಯನ್ನ ಸಂಸದ ಡಿ.ಕೆ ಸುರೇಶ್ ಅಧ್ಯಕ್ಷತೆಯಲ್ಲು ನಡೆಸಲಾಯಿತು.

ಒಂದೆಡೆ ಅಧಿಕಾರಿಗಳಿಗೆ ಚಳಿ ಬಿಡಿಸ್ತಾ ಸಂಸದ ಸುರೇಶ್ ಪ್ರಗತಿ ಪರಿಶೀಲನ ಚರ್ಚೆ ನಡೆಸಿ ಮಾಹಿತಿ ಕೇಳುತ್ತಿದ್ದರು. ತಬ್ಬಿಬ್ಬಾಗಿ ತಲೆ ತಗ್ಗಿಸಿ ಅಧಿಕಾರಿಗಳು ನಿಲ್ಲುತ್ತಿದ್ರೆ, ಸಾರ್ವಜನಿಕರ ಪರ ಕೆಲಸ ಮಾಡದೇ ಸಂಬಳಕ್ಕೆ ಅಂಟಿಕೊಂಡು ಕೂತಿದ್ದೀರಿ ಎಂದು ಫುಲ್ ಗರಂ ಆಗಿದ್ದರು. ಇದಕ್ಕೆ ತಲೆ ಕೆಡಿಸಿಕೊಳ್ಳದ ಕೆಲ ಅಧಿಕಾರಿಗಳು ವಾಟ್ಸಪ್ ಚಾಟಿಂಗ್, ವಾಟ್ಸಪ್ ಸ್ಟೇಟಸ್ ವೀಕ್ಷಣೆ, ಆನ್‍ಲೈನ್ ಶಾಫಿಂಗ್, ಫೇಸ್‍ಬುಕ್‍ನಲ್ಲಿ ತೊಡಗಿಕೊಳ್ಳುವ ಮೂಲಕ ಸಭೆಗೂ ನಮಗೂ ಸಂಬಂಧವಿಲ್ಲ ಎಂಬಂತೆ ಕುಳಿತಿದ್ದರು.

ಪ್ರತಿ ಬಾರೀ ಜಿಲ್ಲಾ ಪ್ರಗತಿ ಪರಿಶೀಲನ ಸಭೆ ನಡೆಸಿದಾಗಲೂ ಸಹ ಅಧಿಕಾರಿಗಳು ಮಾತ್ರ ಈ ರೀತಿ ಬೇಜಾವಾಬ್ದಾರಿತನ ತೋರುತ್ತಲೇ ಇದ್ದಾರೆ. ಸಂಸದ ಸುರೇಶ್ ನಡೆಸುವ ಸಭೆಯಲ್ಲದೇ ಜನಪ್ರತಿನಿಧಿಗಳ ಸಭೆಯಲ್ಲಿ ಅಧಿಕಾರಿಗಳದ್ದು ಇದೇ ಚಾಳಿಯಾಗಿದೆ ಎಂಬ ಮಾತುಗಳು ಪ್ರತಿಬಾರಿಯೂ ಕೇಳಿ ಬರುತ್ತವೆ.

ಈ ಬಗ್ಗೆ ಸಭೆಯಲ್ಲಿಯೇ ಸಂಸದ ಸುರೇಶ್ ಗಮನಕ್ಕೆ ಅಧಿಕಾರಿಗಳ ಮೊಬೈಲ್ ಬಳಕೆ ಹಾಗೂ ಬೇಜಾವಾಬ್ದಾರಿತನದ ಬಗ್ಗೆ ತರಲಾಯಿತು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮುಂದಿನ ಸಭೆಗಳಲ್ಲಿ ಅಧಿಕಾರಿಗಳು ಮೊಬೈಲ್‍ಗಳನ್ನು ಬಳಸದಂತೆ, ಸಭೆಗೆ ಮೊಬೈಲ್‍ಗಳನ್ನ ತರದಂತೆ ಸೂಚನೆ ನೀಡುವಂತೆ ತಿಳಿಸಿದರು.

Comments

Leave a Reply

Your email address will not be published. Required fields are marked *