ಡಿಕೆಶಿಗೆ ಕೆಪಿಸಿಸಿ ಪಟ್ಟ – ತಾಯಿ ಗೌರಮ್ಮರಿಂದ ಕಬ್ಬಾಳಮ್ಮ ದೇವಿಗೆ ವಿಶೇಷ ಪೂಜೆ

ರಾಮನಗರ: ಮಾಜಿ ಸಚಿವ, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟದ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದ್ದು, ಡಿಕೆಶಿ ಬೆಂಬಲಿಗರಲ್ಲಿ ಸಂತೋಷ ಮನೆ ಮಾಡಿದರೆ, ಇತ್ತ ಡಿಕೆಶಿ ತಾಯಿ ಗೌರಮ್ಮ ಶಕ್ತಿದೇವತೆ ಕಬ್ಬಾಳಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕನಕಪುರ ತಾಲೂಕಿನ ಕಬ್ಬಾಳು ಗ್ರಾಮದಲ್ಲಿನ ಶಕ್ತಿದೇವತೆ ಕಬ್ಬಾಳಮ್ಮ ದೇವಿಗೆ ಡಿಕೆಶಿ ತಾಯಿ ಗೌರಮ್ಮ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಡಿಕೆಶಿ ಹೆಚ್ಚು ನಂಬಿರುವ ಕಬ್ಬಾಳಮ್ಮ ದೇವಿಗೆ ತಮ್ಮ ಕುಟುಂಬದಲ್ಲಿ ಏನೇ ವಿಶೇಷವಿದ್ದರೂ ಸಹ ಡಿಕೆಶಿ ಕುಟುಂಬದವರು ಪೂಜೆ ಸಲ್ಲಿಸುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಮಗ ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ಒಲಿಯುತ್ತಿರುವ ಹಿನ್ನೆಲೆಯಲ್ಲಿ ಗೌರಮ್ಮನವರು ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಮಕ್ಕಳ ಹೆಸರಿನಲ್ಲಿ ಅರ್ಚನೆ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿಕೆಶಿ ಸಹ ಯಾವುದೇ ಕಾರ್ಯ ಮಾಡಬೇಕಿದ್ರೂ ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಕೆ ದಿನ, ಚುನಾವಣೆ ಫಲಿತಾಂಶ, ಅಧಿಕಾರ ಸ್ವೀಕಾರ ಪಡೆಯುವ ವೇಳೆಯಲ್ಲಿ ಅಲ್ಲದೇ ಕಳೆದ ವರ್ಷ ತಿಹಾರ್ ಜೈಲಿನಿಂದ ಹೊರಬಂದ ಸಂದರ್ಭದಲ್ಲಿಯೂ ಸಹ ಪೂಜೆ ಸಲ್ಲಿಸಿದ್ದರು.

Comments

Leave a Reply

Your email address will not be published. Required fields are marked *