ಹುತಾತ್ಮ ಯೋಧನ ಪಾರ್ಥಿವ ಶರೀರ ಇಂದು ಮಾಗಡಿಗೆ ಆಗಮನ

– ಶುಕ್ರವಾರ ಸಕಲ ಸರ್ಕಾರಿ ಗೌರವದ ಅಂತ್ಯಕ್ರಿಯೆ

ರಾಮನಗರ: ಜಮ್ಮುವಿನ ಉಧಂಪುರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಸಿಎಲ್‍ಎಸ್‍ಎಫ್‍ನ ಯೋಧ ವೆಂಕಟ ನರಸಿಂಹಮೂರ್ತಿಯ ಪಾರ್ಥಿವ ಶರೀರ ಇಂದು ಹುಟ್ಟೂರು ಮಾಗಡಿಗೆ ಆಗಮಿಸಲಿದೆ.

ಕಳೆದ 14ರಂದು ಜಮ್ಮುವಿನ ಉಧಂಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧ ವೆಂಕಟ ನರಸಿಂಹಮೂರ್ತಿ ಹುತಾತ್ಮರಾಗಿದ್ದರು. ಇಂದು ಬೆಂಗಳೂರಿಗೆ 4:30ಕ್ಕೆ ಪಾರ್ಥಿವ ಶರೀರ ಆಗಮಿಸಲಿದೆ. ಯೋಧನ ಹುಟ್ಟೂರು ಮಾಗಡಿಯ ಹೊಂಬಾಳಮ್ಮನ ಪೇಟೆಗೆ ಸುಮಾರು 6.30ಕ್ಕೆ ಪಾರ್ಥಿವ ಶರೀರ ಆಗಮಿಸಲಿದೆ ಎನ್ನಲಾಗಿದೆ. ಇದನ್ನೂ ಓದಿ: ಉಗ್ರರ ದಾಳಿಯಲ್ಲಿ ಮಾಗಡಿಯ ಯೋಧ ಹುತಾತ್ಮ

ವೆಂಕಟ ನರಸಿಂಹಮೂರ್ತಿ ಅವರ ಪಾರ್ಥಿವ ಶರೀರ ರಾತ್ರಿಯ ಒಳಗಾಗಿ ಬಂದಲ್ಲಿ ಇಂದೇ ಅಂತ್ಯಕ್ರಿಯೆ ನೆರವೇರಲಿದೆ. ಒಂದು ವೇಳೆ ಪಾರ್ಥಿವ ಶರೀರ ಸಂಜೆ ಬಳಿಕ ಬಂದಲ್ಲಿ ಶುಕ್ರವಾರ ಬೆಳಗ್ಗೆ 10.30ರ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

ಹೊಂಬಾಳಮ್ಮನ ಪೇಟೆಯ ಪಾಪಣ್ಣ- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿದ್ದ ಹುತಾತ್ಮ ಯೋಧ ವೆಂಕಟ ನರಸಿಂಹ ಮೂರ್ತಿ ಕಳೆದ 2013ರಲ್ಲಿ ಸೇನೆ ಸೇರ್ಪಡೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ಮನೆಗೆ ಬಂದಿದ್ದ ಯೋಧನ ಮದುವೆ ವಿಚಾರವಾಗಿ ಪ್ರಸ್ತಾಪ ಕೂಡ ನಡೆದಿತ್ತು. ಪೋಷಕರು ಕನ್ಯೆಯ ಹುಡುಕಾಟದಲ್ಲಿ ನಿರತರಾಗಿದ್ದರು. ಆದರೆ ದುರಾದೃಷ್ಟವಶಾತ್ ಗುಂಡಿನ ದಾಳಿಯಲ್ಲಿ ಯೋಧ ಹುತಾತ್ಮರಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Comments

Leave a Reply

Your email address will not be published. Required fields are marked *