ಕುಸಿಯುವ ಹಂತದಲ್ಲಿದೆ ಸ್ಲಂ ಬೋರ್ಡ್ ಕಟ್ಟಡ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಟ್ಟಡಗಳು ವಾಲುವುದು, ಕುಸಿಯೋದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಎನ್ನುವ ರೀತಿಯಾಗಿದ್ದು, ಬನಶಂಕರಿ ಬಳಿ ಇರುವ ರಾಜೇಶ್ವರಿ ಸ್ಲಂ ಜನ ವಾಸಿಸುತ್ತಿರುವ ಕಟ್ಟಡ ಒಂದೂವರೆ ಅಡಿಯಷ್ಟು ಒಂದು ಕಡೆಗೆ ವಾಲಿದೆ.

ಈ ಕಟ್ಟಡ ಕೇವಲ 6 ವರ್ಷಗಳ ಹಿಂದೆ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿತ್ತು. ಆದರೆ ಈಗ ಈ ಕಟ್ಟಡ ಇವತ್ತೋ ನಾಳೆಯೋ ಬೀಳುತ್ತೆ ಎನ್ನುವ ಭಯದಲ್ಲಿ ಅಲ್ಲಿನ ಬಡ ಜನರಿದ್ದಾರೆ. ಕೋಟಿ ಕೋಟಿ ಖರ್ಚು ಮಾಡಿ ನಮ್ಮನ್ನು ಸಾಯಿಸುವುದಕ್ಕೆ ಈ ಕಟ್ಟಡ ಕಟ್ಟಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕಟ್ಟಡ ವಾಲಿದೆ ಎನ್ನುವುದನ್ನು ಸ್ಲಂ ಬೋರ್ಡ್ ತಾಂತ್ರಿಕ ನಿರ್ದೇಶಕರಾದ ಎನ್.ಪಿ ಬಾಲರಾಜು ಒಪ್ಪಿಕೊಂಡಿದ್ದಾರೆ. ಆದರೆ ಏನೂ ಆಗಲ್ಲ ಸ್ವಲ್ಪ ವಾಲಿದೆ ಅಷ್ಟೇ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಕಟ್ಟಡ ಇರುವ ಸ್ಥಳದಲ್ಲಿ ಮೊದಲು ಕ್ವಾರಿ ಇತ್ತು ಇಲ್ಲಿ ಕಸ ತುಂಬಲಾಗಿತ್ತು. ಎಲ್ಲಾ ಪರೀಕ್ಷೆ ನಡೆಸಿ ಕಟ್ಟಡ ಕಟ್ಟಿದ್ದೇವೆ. ಈಗ ಸ್ವಲ್ಪ ವಾಲಿದಂತೆ ಎನಿಸುತ್ತದೆ. ಅದಕ್ಕೆ ರಿಟೈನಿಂಗ್ ವಾಲ್ ಕಟ್ಟುತ್ತಿದ್ದೀವಿ ಎಂದು ಹೇಳುತ್ತಾರೆ.

ಕಟ್ಟಡವೇ ವಾಲಿದೆ ಎಂದು ಈ ರಿಟೈನಿಂಗ್ ವಾಲ್‍ಗೆ ಲಕ್ಷ ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಆ ಕಳಪೆ ಕಾಮಗಾರಿ ಮಾಡಿದರಿಂದಲೇ ಈಗ ಮತ್ತೆ ಹಣವನ್ನು ನುಂಗುತ್ತಿದ್ದಾರೆ. ಮೊದಲು ಕುಸಿದಿರಲಿಲ್ಲ ಈಗ ಕುಸಿದಿದೆ, ನಾಳೆ ಬೀಳುತ್ತೆ. ಕೋಟಿ ಕೋಟಿ ನುಂಗಿ ಕಳಪೆ ಕಾಮಗಾರಿ ಮಾಡಿ ಬಡ ಜನರ ಸಮಾಧಿ ಮಾಡಲು ಕೂತಿದ್ದಾರೆ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

Comments

Leave a Reply

Your email address will not be published. Required fields are marked *