ಗವಿಮಠ ಜಾತ್ರೆಯಲ್ಲಿ ಒಂದು ಲಕ್ಷ ಶೇಂಗಾ ಹೋಳಿಗೆ ತಯಾರಿಸಿದ ಭಕ್ತರು

ಕೊಪ್ಪಳ: ಗವಿ ಸಿದ್ದೇಶ್ವರ ಜಾತ್ರೆ ಮುಗಿದು ಎರಡು ದಿನ ಕಳೆದಿದೆ. ಆದರೂ ನಾನಾ ದಾಸೋಹಕ್ಕೆ ಭಕ್ತರ ಸೇವೆ ಮಾತ್ರ ನಿಂತಿಲ್ಲ. ತಾಲೂಕಿನ ಕರಕಿಹಳ್ಳಿ ಗ್ರಾಮದ ಜನರು ಇಂದು ಒಂದು ಲಕ್ಷ ಹೋಳಿಗೆ ತಯಾರಿಸುತ್ತಿದ್ದಾರೆ. ಗ್ರಾಮಸ್ಥರು ಹಣ ಸಂಗ್ರಹಿಸಿ ಮೂರು ಕ್ವಿಂಟಾಲ್ ಶೇಂಗಾ, ನಾಲ್ಕು ಕ್ವಿಂಟಾಲ್ ಬೆಲ್ಲ, ಎರಡೂವರೆ ಕ್ವಿಂಟಾಲ್ ಮೈದಾಹಿಟ್ಟು ತಂದು ಹೋಳಿಗೆ ಮಾಡಿ ಗವಿಮಠದ ದಾಸೋಹಕ್ಕೆ ಕೊಡಲಿದ್ದಾರೆ.

ಕರಕಿಹಳ್ಳಿ ಗ್ರಾಮದ ಒಂದೊಂದು ಮನೆಗೆ ಒಬ್ಬರಂತೆ ಬಂದು ಅಜ್ಜನ ದಾಸೋಹಕ್ಕೆ ನೀಡಲು ಶೇಂಗಾ ಹೋಳಿಗೆ ಮಾಡುತ್ತಿದ್ದಾರೆ. ಗ್ರಾಮದವರೆಲ್ಲ ಸೇರಿ ಹಣ ಹಾಕಿ ಗವಿ ಸಿದ್ದೇಶ್ವರನಿಗೆ ತಮಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.

ಗವಿಸಿದ್ದೇಶ್ವರ ದಾಸೋಹಕ್ಕೆ ತರಹೇವಾರಿ ಖಾದ್ಯಗಳು ಬರುವುದು ಕಾಮನ್. ಭಕ್ತರು ರೊಟ್ಟಿ, ಮಾದಲಿ, ತುಪ್ಪ ತಂದು ಕೊಡುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಕರಕಿಹಳ್ಳಿ ಗ್ರಾಮದ ಭಕ್ತರು ಒಂದು ಲಕ್ಷ ಶೇಂಗಾ ಹೋಳಿಗೆ ತಯಾರಿಸುತ್ತಿದ್ದಾರೆ. ಕರಕಿಹಳ್ಳಿ ಗ್ರಾಮಸ್ಥರು ಒಂದು ಕಡೆ ಸೇರಿ ಬೆಳಗ್ಗೆ ಒಂಬತ್ತು ಗಂಟೆಯಿಂದ ಹೋಳಿಗೆ ಮಾಡುವುದಲ್ಲಿ ನಿರತರಾಗಿದ್ದಾರೆ. ಪುರುಷರು ಮಹಿಳೆಯರು ಎನ್ನದೇ ಎಲ್ಲರೂ ಒಂದಾಗಿ ಹೋಳಿಗೆ ತಯಾರಿಸಿದ್ದಾರೆ.

ಶೇಂಗಾ ಹೋಳಿಗೆಗೆ ಬೇಕಾದ ಪದಾರ್ಥಗಳನ್ನು ಮಹಿಯರು ಅನೇಕ ಗುಂಪುಗಳನ್ನು ಮಾಡಿಕೊಂಡು ಹೋಳಿಗೆ ತಯಾರಿಸಿದ್ದಾರೆ. ಸರಿ ಸುಮಾರು ಒಂದು ಲಕ್ಷ ಶೇಂಗಾ ಹೋಳಿಗೆ ತಯಾರಿಸಿ ಗವಿಮಠ ದಾಸೋಹಕ್ಕೆ ಮೆರವಣಿಗೆ ಮೂಲಕ ಮಠಕ್ಕೆ ಹೋಳಿಗೆ ಕೊಡಲಿದ್ದಾರೆ.

ತರಹೇವಾರಿ ಖಾದ್ಯಗಳು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ದಾಸೋಹಕ್ಕೆ ನಿತ್ಯವೂ ಹರಿದು ಬರುತ್ತಿದೆ. ಭಕ್ತರು ಸ್ವಯಂ ಪ್ರೇರಿತವಾಗಿ ಹಳ್ಳಿ ಹಳ್ಳಿಗಳಲ್ಲಿ ಖಾದ್ಯ ತಯಾರಿಸಿ ಮಠಕ್ಕೆ ನೀಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *